ಯುವತಿ ಅನುಮಾನಾಸ್ಪದ ಸಾವು- ಆಸ್ಪತ್ರೆಗೆ ದಾಖಲಿಸಿದ ಯುವಕ ಪರಾರಿ

ಉಡುಪಿ: ಜಿಲ್ಲೆಯಲ್ಲಿ ಯುವತಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಮೃತ ಯುವತಿಯನ್ನು ಉಡುಪಿ ತಾಲೂಕು ಕುಕ್ಕೆಹಳ್ಳಿ ನಿವಾಸಿ ರಕ್ಷಿತಾ ನಾಯಕ್ ಎಂದು ಗುರುತಿಸಲಾಗಿದೆ.

ಕಳೆದ ರಾತ್ರಿ ಪ್ರಶಾಂತ್ ಕುಂದರ್ ಎಂಬಾತ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ರಕ್ಷಿತಾಳನ್ನು ಆಟೋದಲ್ಲಿ ಕರೆದುಕೊಂಡು ಬಂದು ಉಡುಪಿಯ ಗಾಂಧಿ ಆಸ್ಪತ್ರೆಗೆ ದಾಖಲು ಮಾಡಿದ್ದಾನೆ. ವೈದ್ಯರು ಯುವತಿ ಮೃತಪಟ್ಟಿದ್ದಾಳೆ ಎಂದು ಘೋಷಿಸಿದ ಕೂಡಲೇ ಯುವಕ, ಯುವತಿಯ ಮನೆಯವರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾನೆ. ಕೆಲವೇ ಕ್ಷಣಗಳಲ್ಲಿ ಯುವಕ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ.

ಉಡುಪಿ ನಗರ ಠಾಣೆ ಪೊಲೀಸ್ ಆಸ್ಪತ್ರೆಗೆ ಆಗಮಿಸಿ ಪರಿಶೀಲಿಸಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಯುವತಿಯ ಮೃತದೇಹವನ್ನು ರವಾನಿಸಿದ್ದಾರೆ. ರಕ್ಷಿತಾ ನಾಯಕ್ ಸಾವಿಗೆ ಕಾರಣ ಏನು ಎಂಬುದು ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಗೊತ್ತಾಗಬೇಕಾಗಿದೆ. ಪ್ರಶಾಂತ್ ಕುಂದರ್ ಗೆ ಈ ಹಿಂದೆಯೇ ಬೇರೆ ಮದುವೆಯಾಗಿದ್ದು, ರಕ್ಷಿತಾ ಜೊತೆ ಸಂಪರ್ಕದಲ್ಲಿದ್ದ. ಉಡುಪಿಯ ಅಂಬಾಗಿಲಿನಲ್ಲಿ ಬಾಡಿಗೆ ಮನೆ ಮಾಡಿದ್ದರು ಎಂದು ಉಡುಪಿ ನಗರ ಠಾಣಾ ಪೊಲೀಸರು ಮಾಹಿತಿ ನೀಡಿದ್ದಾರೆ.

ಮಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಾನು ಕೆಲಸಕ್ಕೆ ಇರುವುದಾಗಿ ಮನೆಯಲ್ಲಿ ಹೇಳಿದ್ದ ರಕ್ಷಿತಾ, ಪ್ರಶಾಂತ್ ಕುಂದರ್ ಜೊತೆ ವಾಸವಾಗಿದ್ದಳು ಎನ್ನಲಾಗಿದೆ. ತಾವಿಬ್ಬರೂ ಅಣ್ಣ-ತಂಗಿ ಎಂದು ಮನೆ ಮಾಲೀಕರ ಜೊತೆ ಇಬ್ಬರೂ ಸುಳ್ಳು ಹೇಳಿದ್ದರು. ಕೆಲ ದಿನಗಳ ಹಿಂದೆ ಪ್ರಶಾಂತ್ ಕುಂದರ್ ಪತ್ನಿ ಈ ವಿಚಾರ ತಿಳಿದು ಫೋನ್ ಮಾಡಿ ರಕ್ಷಿತಾರನ್ನು ತರಾಟೆಗೆ ತೆಗೆದುಕೊಂಡಿದ್ದಳು ಎಂಬ ಮಾಹಿತಿಯನ್ನೂ ಉಡುಪಿ ಪೊಲೀಸರು ಕೊಟ್ಟಿದ್ದಾರೆ. ರಕ್ಷಿತಾ ಸಾವಿಗೆ ನಿಖರವಾದ ಕಾರಣವೇನು ಎಂಬುದು ಮರಣೋತ್ತರ ಪರೀಕ್ಷೆಯ ನಂತರ ಗೊತ್ತಾಗಬೇಕಾಗಿದೆ.

ಪ್ರಶಾಂತ್ ಕುಂದರ್ ಬೈಂದೂರು ತಾಲೂಕು ಜಡ್ಕಲ್ ಗ್ರಾಮದ ನಿವಾಸಿ. ಈ ಹಿಂದೆ ಪ್ರಶಾಂತ್ ಗೆ ಮದುವೆ ಆಗಿದ್ದು, ಆತನ ಪತ್ನಿ ಉಡುಪಿಯಲ್ಲೇ ನೆಲೆಸಿದ್ದಾಳೆ ಎಂಬ ಮಾಹಿತಿ ಇದೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪರಾರಿಯಾಗಿರುವ ಪ್ರಶಾಂತ್ ಕುಂದರ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Comments

Leave a Reply

Your email address will not be published. Required fields are marked *