ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ನಗರದ ಒಂದು ಭಾಗ ಅಕ್ಷರಶಃ ಕಸದ ತೊಟ್ಟಿಯಂತಾಗಿದೆ. ಕೇರಳಿಗರು ಇಲ್ಲಿ ತಂದು ಸುರಿಯುತ್ತಿರುವ ತ್ಯಾಜ್ಯಕ್ಕೆ ಗುಂಡ್ಲುಪೇಟೆಯ ಜನತೆ ತತ್ತರಿಸಿ ಹೋಗಿದ್ದಾರೆ. ಆದರೆ ಈ ವಿಚಾರದಲ್ಲಿ ಜಿಲ್ಲಾಡಳಿತ ಮಾತ್ರ ಕಣ್ಮುಚ್ಚಿ ಕುಳಿತಿರುವುದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಗುಂಡ್ಲುಪೇಟೆ ಪುರಸಭೆ ಕಸ ಸುರಿಯಲು ಜಾಗವೊಂದನ್ನು ಗುರುತು ಮಾಡಿದೆ. ಕೇರಳಿಗರು ಕರ್ನಾಟಕ ಗಡಿ ದಾಟಿ ಟೆಂಪೋ, ಲಾರಿಗಳಲ್ಲಿ ತ್ಯಾಜ್ಯ ತಂದು ಈ ಜಾಗದಲ್ಲೇ ಸುರಿಯುತ್ತಿದ್ದಾರೆ. ಪ್ಲಾಸ್ಟಿಕ್, ಮಾಂಸದಂಗಡಿಗಳ ತ್ಯಾಜ್ಯ, ಕೊಳೆತ ತರಕಾರಿ ಮತ್ತಿತರ ವಸ್ತುಗಳನ್ನು ತಂದು ಇಲ್ಲಿ ಹಾಕಲಾಗುತ್ತಿದೆ. ಗುಂಡ್ಲುಪೇಟೆ ಪಟ್ಟಣದ ಬಳಿ ರಾಷ್ಟ್ರೀಯ ಹೆದ್ದಾರಿ 766 ರ ಪಕ್ಕದಲ್ಲೇ ಪುರಸಭೆಯ ಕಸ ಸುರಿಯುವ ಜಾಗ ಇದೆ. ಹೀಗಾಗಿ ಹೆದ್ದಾರಿಯಲ್ಲಿ ಬಂದು ಇಲ್ಲಿ ಕಸ ಸುರಿಯಲಾಗುತ್ತಿದೆ.

ಕೇರಳ ಹಾಗೂ ಕರ್ನಾಟಕ ಗಡಿ ಭಾಗದಲ್ಲಿ ಚೆಕ್ ಪೋಸ್ಟ್ ಇದೆ. ಯಾವ ವಾಹನ ರಾಜ್ಯಕ್ಕೆ ಪ್ರವೇಶ ಪಡೆಯುತ್ತಿದೆ ಎಂಬಿತ್ಯಾದಿ ವಿಚಾರಗಳನ್ನು ಚೆಕ್ಪೋಸ್ಟ್ ನಲ್ಲಿ ಗಮನಿಸಬೇಕು. ಆದರೆ ಜಿಲ್ಲಾಡಳಿತ ಮಾತ್ರ ಈ ವಿಚಾರದಲ್ಲಿ ಕಣ್ಮುಚ್ಚಿ ಕುಳಿತಿದೆ.

ಇನ್ನೊಂದೆಡೆ ಪುರಸಭೆಯವರು ನಿತ್ಯ ಲಾರಿಗಟ್ಟಳೆ ಕಸ ತಂದು ರಾಶಿ ಹಾಕುತ್ತಿದ್ದಾರೆ. ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುವುದನ್ನು ಬಿಟ್ಟು ಕಸದ ರಾಶಿಗೆ ಬೆಂಕಿ ಹಚ್ಚಲಾಗುತ್ತಿದೆ. ಇದರಿಂದ ಉಸಿರಾಟದ ಸಮಸ್ಯೆಯ ಜೊತೆಗೆ ಪರಿಸರ ಮಾಲಿನ್ಯ, ರೋಗರುಜಿನ ಹರಡುವ ಆತಂಕ ಸ್ಥಳೀಯರಿಗೆ ಕಾಡುತ್ತಿದೆ.

Leave a Reply