ಉಗ್ರರಿಂದ ಬಿಜೆಪಿ ನಾಯಕನ ರಕ್ಷಿಸಿ ಪೇದೆ ಅಲ್ತಾಫ್ ಹುಸೈನ್ ಹುತಾತ್ಮ

-ಗುಂಡು ತಗುಲಿದ್ರೂ ಉಗ್ರನನ್ನ ಹೊಡೆದುರುಳಿಸಿದ ಅಲ್ತಾಫ್

ಶ್ರೀನಗರ: ಬಿಜೆಪಿ ನಾಯಕ ಗುಲಾಮ್ ಖಾದೀರ್ ಅವರನ್ನು ಉಗ್ರರ ದಾಳಿಯಿಂದ ರಕ್ಷಿಸಿ ಜಮ್ಮು-ಕಾಶ್ಮೀರದ ಪೊಲೀಸ್ ಪೇದೆ ಮೊಹಮ್ಮದ್ ಅಲ್ತಾಫ್ ಹುಸೈನ್ ಹುತಾತ್ಮರಾಗಿದ್ದಾರೆ.

ಅಲ್ತಾಫ್ ಹುಸೈನ್ ಸ್ಥಳೀಯ ಬಿಜೆಪಿ ಮುಖಂಡ ಗುಲಾಮ್ ಖಾದೀರ್ ಅವರ ರಕ್ಷಣೆಗೆ ನೀಡಿದ ಪೊಲೀಸ್ ತಂಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಮಂಗಳವಾರ ಸಂಜೆ ಗುಲಾಮ್ ಖಾದಿರ್ ತಮ್ಮ ಭದ್ರತಾ ಸಿಬ್ಬಂದಿ ಅಲ್ತಾಫ್ ಜೊತೆ ಕಂಗನ್ ನಗರಕ್ಕೆ ಹೊರಟಿದ್ದ ವೇಳೆ ಉಗ್ರರು ದಾಳಿ ನಡೆಸಿದ್ದರು.

ಈ ವೇಳೆ ಎಚ್ಚೆತ್ತ ಅಲ್ತಾಪ್ ಹುಸೈನ್ ಉಗ್ರರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ಚಕಮಕಿಯಲ್ಲಿ ಗುಂಡು ತಗುಲಿದ್ರೂ ವಿಚಲಿತರಾಗದ ಅಲ್ತಾಫ್ ಓರ್ವ ಉಗ್ರನನ್ನು ಹೊಡೆದುರುಳಿಸಿದ್ದಾರೆ. ಗಾಯಗೊಂಡಿದ್ದ ಅಲ್ತಾಫ್ ಅವರನ್ನ ಕೂಡಲೇ ಶ್ರೀನಗರದ ಆಸ್ಪತ್ರೆಗೆ ಕರೆದೊಯ್ಯಲಾಯ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಅಲ್ತಾಫ್ ಹುಸೈನ್ ಹುತಾತ್ಮರಾಗಿದ್ದಾರೆ. ಮೃತ ಉಗ್ರನನ್ನು ಪುಲ್ವಾಮದ ಶಬ್ಬೀರ್ ಎಂದು ಗುರುತಿಸಲಾಗಿದೆ.

ಹುತಾತ್ಮ ಅಲ್ತಾಫ್ ಹುಸೈನ್ ಶ್ರೀನಗರದ ನಿವಾಸಿಯಾಗಿದ್ದು, 2011ರಲ್ಲಿ ಪೊಲೀಸ್ ವಿಭಾಗದಲ್ಲಿ ಉದ್ಯೋಗಕ್ಕೆ ಸೇರಿಕೊಂಡಿದ್ದರು. ಕಳೆದ ಮೂರು ತಿಂಗಳಿನಿಂದ ಬಿಜೆಪಿ ನಾಯಕ ಗುಲಾಮ್ ಖಾದಿರ್ ಭದ್ರತಾ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಅಲ್ತಾಫ್ ಅವರಿಗೆ ಒಂದು ವರ್ಷದ ಮಗ, ಪತ್ನಿ, ತಂದೆ-ತಾಯಿ ಇದ್ದಾರೆ.

Comments

Leave a Reply

Your email address will not be published. Required fields are marked *