ವಿರುಪಾಪುರ ಗಡ್ಡೆಯಲ್ಲಿದ್ದ ಅನಧಿಕೃತ ರೆಸಾರ್ಟ್ ತೆರವು

ಕೊಪ್ಪಳ: ಇಲ್ಲಿನ ಗಂಗಾವತಿ ತಾಲೂಕಿನ ವಿರುಪಾಪುರ ಗಡ್ಡೆಯಲ್ಲಿ ನಿರ್ಮಿಸಿದ್ದ ಅನಧಿಕೃತ ರೆಸಾರ್ಟ್ ಗಳನ್ನು ಹಂಪಿ ಪ್ರಾಧಿಕಾರಿ ಇಲಾಖೆ ಹಾಗೂ ಜಿಲ್ಲಾಡಳಿತದ ನೇತೃತ್ವದಲ್ಲಿ ಇಂದು ತೆರವು ಮಾಡಲಾಯಿತು.

ಪ್ರಾಧಿಕಾರ ವ್ಯಾಪ್ತಿಯಲ್ಲಿ ಇರುವ ಪ್ರದೇಶದಲ್ಲಿ ಯಾವುದೇ ರೀತಿಯ ಕಟ್ಟಡಗಳನ್ನು ನಿರ್ಮಿಸುವಂತಿಲ್ಲ. ಆದರೆ ಇಲ್ಲಿನ ಪ್ರಭಾವಿಗಳು ಯಾವುದೇ ಪರವಾನಿಗೆಯನ್ನು ಪಡೆದುಕೊಳ್ಳದೆ ರೆಸಾರ್ಟ್‍ಗಳನ್ನು ನಿರ್ಮಿಸಿಕೊಂಡು ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಹಂಪಿ ಪ್ರಾಧಿಕಾರಿ ಹಾಗೂ ಜಿಲ್ಲಾಡಳಿತ, ಕೋರ್ಟ್ ಮೊರೆ ಹೋಗಿತ್ತು.

ಕೋರ್ಟ್ ಆದೇಶವು ಜಿಲ್ಲಾಡಳಿತದ ಪರವಾಗಿದ್ದರಿಂದ ಕಳೆದ 6 ತಿಂಗಳು ಹಿಂದೆ ಗಡ್ಡೆಯಲ್ಲಿ ಇದ್ದ ರೆಸಾರ್ಟ್‍ಗಳನ್ನು ಸಂಪೂರ್ಣ ತೆರವು ಮಾಡಲಾಗಿತ್ತು. ಆದರೆ ಲಕ್ಷ್ಮಿ ಗೋಲ್ಡನ್ ಬಿಚ್ ರೆಸಾರ್ಟ್ ಮಾಲೀಕರು ಮಾತ್ರ ತೆರವು ಕಾರ್ಯಾಚರಣೆಯನ್ನು ಪ್ರಶ್ನಿಸಿ ಕೋರ್ಟಿಗೆ ಪುನಃ ಮೊರೆ ಹೋಗಿದ್ದರು. ಕೋರ್ಟ್ ಅರ್ಜಿ ವಿಚಾರಣೆಯನ್ನು ನಡೆಸಿ ಮಾಲೀಕರು ಅರ್ಜಿಯನ್ನು ವಜಾ ಗೊಳಿಸಿ, ತೆರವು ಮಾಡಲು ಆದೇಶ ನೀಡಿದ್ದರಿಂದ ಅಧಿಕಾರಿಗಳು ತೆರವು ಮಾಡಿದ್ದರು.

ನೂರಕ್ಕೂ ಹೆಚ್ಚು ಕೊಠಡಿಗಳನ್ನು 5 ಜೆಸಿಬಿ ಮತ್ತು ಇಟಾಚಿಯಿಂದ ಬೆಳಗ್ಗೆಯಿಂದ ಕಾರ್ಯಾಚರಣೆ ಮಾಡಿ ಅಕ್ರಮ ಕೊಠಡಿಗಳನ್ನು ತೆರವು ಮಾಡಲಾಯಿತು. ಹಂಪಿ ಪ್ರಾಧಿಕಾರ ಇಲಾಖೆ ಆಯುಕ್ತ ಬಿ.ಎನ್. ಲೋಕೇಶ್ ಮತ್ತು ನಗರಾಭಿವೃದ್ಧಿ ಕೋಶ ಯೋಜನಾಧಿಕಾರಿ ಸಿದ್ರಾಮೇಶ್ವರ ಗಂಗಾವತಿ ಡಿವೈಎಸ್‍ಪಿ ರುದ್ರಶ್ ನೇತ್ರತ್ವದಲ್ಲಿ ತೆರವು ಕಾರ್ಯಾಚರಣೆ ನಡೆಯಿತು.

Comments

Leave a Reply

Your email address will not be published. Required fields are marked *