ನಾಯಿಗೆ ಒದ್ದಂತೆ ಒದೆಯುವೆ – ಠಾಣೆಗೆ ತೆರಳಿ ಪೊಲೀಸರಿಗೇ ಅವಾಜ್ ಹಾಕಿದ ಭೂಪ

ರಾಯಚೂರು: ವ್ಯಕ್ತಿಯೊಬ್ಬ ಠಾಣೆಗೆ ತೆರಳಿ ಪೊಲೀಸರಿಗೇ ಅವಾಜ್ ಹಾಕಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ಈ ಮೂಲಕ ಠಾಣೆಯಲ್ಲಿಯೇ ಪೊಲೀಸರಿಗೆ ರಕ್ಷಣೆ ಇಲ್ಲದಂತಾಗಿದೆ.

ವ್ಯಕ್ತಿಯನ್ನು ಮಲ್ಲೇಶ ಪೂಜಾರಿ ಎಂದು ಗುರುತಿಸಲಾಗಿದ್ದು, ಈತ ಸ್ಥಳೀಯ ಪತ್ರಕರ್ತ ಎಂದು ಹೇಳಿಕೊಂಡಿದ್ದಾನೆ. ಅಲ್ಲದೆ ಮೇಲಾಧಿಕಾರಿಗಳ ಹೆಸರು ಹೇಳಿಕೊಂಡು ಸಿಬ್ಬಂದಿಗೆ ಮನಬಂದಂತೆ ಗದರಿದ್ದಾನೆ.

ಮಲ್ಲೇಶ್ ಗೆ ಈಗಾಗಲೇ ಮೂರು ಮದುವೆ ಆಗಿದೆ ಎಂಬ ಆರೋಪ ಕೇಳಿ ಬಂದಿದೆ. ತನ್ನ ತಂಗಿಗೆ ಮೋಸ ಮಾಡಿದ್ದಾನೆ ಎಂದು ಹೇಳಿ ಪತ್ನಿಯೊಬ್ಬಳ ತಮ್ಮ ದೇವದುರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹೀಗಾಗಿ ಪೊಲೀಸರು ಮಲ್ಲೇಶ್ ವಿರುದ್ಧ ಪ್ರಕರಣ ಕೂಡ ದಾಖಲಿಸಿಕೊಂಡಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆಯೇ ಮಲ್ಲೇಶ್ ಕೂಡ, ಪತ್ನಿ ಕುಟುಂಬಸ್ಥರು ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಅದೇ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಲು ಮುಂದಾಗಿದ್ದನು.

ಈ ವೇಳೆ ಪೊಲೀಸರು ಆತನ ದೂರು ಸ್ವೀಕರಿಸಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಇದರಿಂದ ಸಿಟ್ಟಿಗೆದ್ದ ಮಲ್ಲೇಶ್ ಪತ್ನಿ ಕಡೆಯವರ ದೂರು ಮಾತ್ರ ಸ್ವೀಕರಿಸುತ್ತೀರಿ. ಆದರೆ ನನ್ನ ಕಡೆಯಿಂದ ಯಾಕೆ ಅವರ ವಿರುದ್ಧ ದೂರು ದಾಖಲಿಸಲ್ಲ ಅಂತ ಕ್ಯಾತೆ ತೆಗೆದು, ನೇರವಾಗಿ ಪೊಲೀಸ್ ಠಾಣೆಗೆ ತೆರಳಿದ್ದಾನೆ. ಪೊಲೀಸ್ ಸಿಬ್ಬಂದಿಗೆ, ನಾಯಿಗೆ ಒದ್ದಂತೆ ಒದೆಯುವೆ. ಎಸ್‍ಪಿ ಗೊತ್ತು ಅಂತ ಮೇಜು ಕುಟ್ಟಿ, ಫೋನ್ ತೆಗೆದು ನಾಟಕವಾಡಿ ಅವಾಜ್ ಹಾಕಿದ್ದಾನೆ. ಅಲ್ಲದೆ ಠಾಣೆಯಲ್ಲಿ ಪೊಲೀಸರಿಗೆ ಅತ್ಯಂತ ಕೆಳಮಟ್ಟದ ಪದಗಳಿಂದ ಬೈದಿದ್ದಾನೆ.

ಮಲ್ಲೇಶ್ ಇಷ್ಟೆಲ್ಲ ಅವಾಜ್ ಹಾಕಿದ್ರೂ ಪೊಲೀಸರು ಮಾತ್ರ ಗಪ್‍ಚುಪ್ ಆಗಿದ್ದರು. ಸದ್ಯ ವ್ಯಕ್ತಿ ಅವಾಜ್ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ರದ್ದಾಂತ ಮಾಡಿದ ಬಳಿಕ ಮಲ್ಲೇಶ್ ನೀಡಿದ ದೂರನ್ನು ಕೂಡ ಪೊಲೀಸರು ಸ್ವೀಕರಿಸಿದ್ದು, ಪತ್ನಿ ಕುಟುಂಬಸ್ಥರ ವಿರುದ್ಧವೂ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *