ಪಾಪ್ಯುಲರ್ ಫ್ರಂಟ್‍ನಿಂದ 1,269 ಕೊರೊನಾ ಬಾಧಿತ ಮೃತದೇಹಗಳ ಅಂತ್ಯಸಂಸ್ಕಾರ

ಮಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವು ರಾಜ್ಯದಲ್ಲಿ ಈವರೆಗೆ ಕೋವಿಡ್ ಬಾಧಿತ 1,269 ಮೃತದೇಹಗಳ ಅಂತ್ಯಸಂಸ್ಕಾರವನ್ನು ನಡೆಸಿದೆ.

ಕೊರೊನಾ ಕಾಲದ ಪ್ರಾರಂಭದಲ್ಲಿ ಭೀತಿಯ ಕಾರಣದಿಂದಾಗಿ ಸೋಂಕಿತ ವ್ಯಕ್ತಿಗಳಿಗೆ ಬಹಿಷ್ಕಾರ ಹಾಕುವ, ಮೃತದೇಹಗಳನ್ನು ಕುಟುಂಬಸ್ಥರೇ ತಿರಸ್ಕರಿಸುವ ಸನ್ನಿವೇಶ ಕಂಡು ಬಂದಿತ್ತು. ಮೃತದೇಹಗಳಿಗೆ ಕನಿಷ್ಠ ಗೌರವವನ್ನೂ ನೀಡದೆ ಅವುಗಳನ್ನು ಎಲ್ಲೆಂದರಲ್ಲಿ ಎಸೆಯುವ, ಸಾಮೂಹಿಕವಾಗಿ ಹೂತು ಬಿಡುವ ಘಟನಾವಳಿಗಳಿಗೆ ನಾಡಿನ ಜನರು ಸಾಕ್ಷಿಯಾಗಿದ್ದರು.

ಇಂಥಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕೊರೊನಾ ವಾರಿಯರ್ಸ್ ಗಳಾಗಿ ಮುಂದೆ ಬಂದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರು, ಧರ್ಮ ಬೇಧವಿಲ್ಲದೆ ದೇಶದಾದ್ಯಂತ ಕೋವಿಡ್ ಬಾಧಿತ ಮೃತದೇಹಗಳ ಅಂತ್ಯ ಸಂಸ್ಕಾರದಲ್ಲಿ ಕೈಜೋಡಿಸಿದರು. ಮಹಾರಾಷ್ಟ್ರದ ಪುಣೆಯಲ್ಲಿ ಮೃತದೇಹವೊಂದನ್ನು ಕುಟುಂಬಸ್ಥರೇ ನಿರಾಕರಿಸಿದಾಗ, ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರು ಸ್ಥಳೀಯಾಡಳಿತ ಸಂಸ್ಥೆಯ ಅನುಮತಿಯೊಂದಿಗೆ ಮೊದಲ ಬಾರಿಗೆ ರಂಗಕ್ಕೆ ಧುಮುಕಿದರು.

ಕರ್ನಾಟಕದಲ್ಲಿ ಕೋವಿಡ್ ಸಾವುಗಳು ಸಂಭವಿಸಲಾರಂಭಿಸಿದಾಗ ಪಾಪ್ಯುಲರ್ ಫ್ರಂಟ್, ಆರೋಗ್ಯ ಇಲಾಖೆಯ ಸಹಯೋಗದಲ್ಲಿ ತರಬೇತಿ ಪಡೆದ ತನ್ನ ಕಾರ್ಯಕರ್ತರ ಪಡೆಯನ್ನು ಸಜ್ಜುಗೊಳಿಸಿತು. ಕರ್ನಾಟಕ ರಾಜ್ಯಾದ್ಯಂತ ಪಾಪ್ಯುಲರ್ ಫ್ರಂಟ್ ಇಲ್ಲಿಯವರೆಗೆ 1,269 ಮಂದಿಯ ಅಂತ್ಯ ಸಂಸ್ಕಾರವನ್ನು ನಡೆಸಿದ್ದು, ಜಾತಿ, ಧರ್ಮವನ್ನು ಮೀರಿದ ಈ ಮಾನವೀಯ ಕಾರ್ಯವು ವ್ಯಾಪಕವಾಗಿ ಜನರ ಪ್ರಶಂಸೆಗೆ ಪಾತ್ರವಾಗಿದೆ.

Comments

Leave a Reply

Your email address will not be published. Required fields are marked *