30 ವರ್ಷ, 3 ಕಿ.ಮೀ ಕಾಲುವೆ ಅಗೆದು ಗ್ರಾಮಕ್ಕೆ ನೀರು ಹರಿಸಿದ ರೈತನಿಗೆ ಆನಂದ್ ಮಹೀಂದ್ರಾ ಗಿಫ್ಟ್

ನವದೆಹಲಿ: ಇತ್ತೀಚೆಗಷ್ಟೇ ಬಜಾಜ್ ಸ್ಕೂಟರಿನಲ್ಲಿ ತನ್ನ ತಾಯಿಯನ್ನು ದೇಶ ಸುತ್ತಿಸಿದ ಮೈಸೂರಿನ ವ್ಯಕ್ತಿಗೆ ಮಹೀಂದ್ರಾ ಗ್ರೂಪ್ ಮುಖ್ಯಸ್ಥ ಆನಂದ್ ಮಹೀಂದ್ರಾ ಕಾರನ್ನು ಬಹುಮಾನವಾಗಿ ನೀಡಿದ್ದರು. ಈ ಬೆನ್ನಲ್ಲೇ ಇದೀಗ ಬಿಹಾರದ ರೈತನಿಗೆ ಗೌರವಾರ್ಥವಾಗಿ ಗಿಫ್ಟ್ ನೀಡಿದ್ದಾರೆ.

ತಮ್ಮ ಉದಾರ ಮನೋಭಾವದಿಂದಲೇ ಜನರ ಮನ ಗೆದ್ದಿರುವ ಆನಂದ್ ಮಹೀಂದ್ರಾ ಅವರಿಗೆ ಟ್ವಟ್ಟರ್ ಬಳೆದಾರರೊಬ್ಬರು ರೈತನ ಫೋಟೋ ಹಾಕಿ, ಮಹೀಂದ್ರಾ ಕಂಪನಿಯವರು ಈ ವ್ಯಕ್ತಿಯನ್ನು ಗೌರವಿಸಲು ಹೆಮ್ಮೆಪಡುತ್ತಾರೆ ಎಂದು ನಾನು ಭಾವಿಸುವುದಾಗಿ ಬರೆದುಕೊಂಡು ಟ್ಯಾಗ್ ಮಾಡಿದ್ದಾರೆ.

https://twitter.com/rohinverma2410/status/1306857678317129730

ಈಗಾಗಲೇ ರೈತನ ಕಥೆಯನ್ನು ಕೇಳಿರುವ 65 ವರ್ಷದ ಬಿಲಿಯನೇರ್ ಉದ್ಯಮಿ, ಅವರು ನಿರ್ಮಿಸಿದ ಕಾಲುವೆ ತಾಜ್ ಅಥವಾ ಪಿರಮಿಡ್ ಗಳಂತೆಯೇ ಒಂದು ಸ್ಮಾರಕವಾಗಿದೆ ಎಂದು ನಾನು ಭಾವಿಸುತ್ತೇನೆ. ಮಹೀಂದ್ರಾ ಕಂಪನಿಯ ಮೂಲಕ ಅವರಿಗೆ ಟ್ರ್ಯಾಕ್ಟರ್ ಕೊಡುತ್ತಿರುವುದು ನನ್ನ ಸೌಭಾಗ್ಯ ಎಂದು ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ ಆ ವ್ಯಕ್ತಿಯನ್ನು ನಮ್ಮ ತಂಡ ಹೇಗೆ ಸಂಪರ್ಕಿಸಬಹುದು ಎಂದು ಪ್ರಶ್ನಿಸಿದ್ದರು.

ಸದ್ಯ ಕಂಪನಿ ರೈತನನ್ನು ಸಂಪರ್ಕಿಸಿದ್ದು, ಸಂಸ್ಥೆಯ ಪ್ರಾದೇಶಿಕ ವ್ಯಾಪಾರಿ ಸಿದ್ಧಿನಾಥ್ ವಿಶ್ವಕರ್ಮ, ಲಾಂಗಿ ಭುಯಾನ್‍ಗೆ ಕಳೆದ ಶನಿವಾರ ಮಹೀಂದ್ರಾ ಟ್ರ್ಯಾಕ್ಟರನ್ನು ಹಸ್ತಾಂತರಿಸಿದ್ದಾರೆ. ಇದನ್ನೂ ಓದಿ: ಆಧುನಿಕ ಶ್ರವಣಕುಮಾರನಿಗೆ ಕಾರ್ ಗಿಫ್ಟ್ ಕೊಟ್ಟ ಆನಂದ್ ಮಹೀಂದ್ರಾ

30 ವರ್ಷ, 3 ಕಿ.ಮಿ ಕಾಲುವೆ:
ಮಳೆ ನೀರನ್ನು ಶೇಖರಣೆ ಮಾಡಲು ಲೌಂಗಿ 3 ಕಿ.ಮೀ ಉದ್ದದ ಕಾಲುವೆಯನ್ನು ನಿರ್ಮಿಸಿದ್ದಾರೆ. ಈ ಮೂಲಕ ಅವರು ಆಧುನಿಕ ಭಗೀರಥ ಎಂದೆನಿಸಿಕೊಂಡಿದ್ದರು. ಇವರು ಬರೋಬ್ಬರಿ 30 ವರ್ಷಗಳಿಂದ ತನ್ನ ಗ್ರಾಮದ ಜಮೀನಿಗಳಿಗೆ ನೆರವಾಗಲು ಕಾಲುವೆ ನಿರ್ಮಿಸಿದ್ದಾರೆ. ಗಯಾದ ಲಥುವಾ ಏರಿಯಾದಲ್ಲಿ ಬರುವ ಕೊಥಿಲವಾ ಗ್ರಾಮ ನಿವಾಸಿಯಾಗಿರುವ ಲೌಂಗಿ, ಗ್ರಾಮದ ಜನ ನೀರಿನ ಅಭಾವ ಎದುರಿಸುತ್ತಿದ್ದರು. ಇದನ್ನು ತಪ್ಪಿಸಲೆಂದು ಸಮೀಪದ ಬೆಟ್ಟದ ಇಳಿಜಾರಿಗೆ ಅನುಗುಣವಾಗಿ ಕಾಲುವೆ ಮಾಡಿ ಮಳೆ ನೀರು ಹರಿದು ಕೆರೆಗೆ ಸೇರುವಂತೆ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಈ ಸಂಬಂಧ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದ ಲೌಂಗಿ, ಈ ಕಾಲುವೆಯನ್ನು ಅಗೆಯಲು ನನಗೆ ಬರೋಬ್ಬರಿ 30 ವರ್ಷಗಳು ಬೇಕಾಯಿತು. ಈ ಕಾಲುವೆ ನೀರು ಹಳ್ಳಿಯ ಕೊಳಕ್ಕೆ ಸೇರಿ ಅಲ್ಲಿ ಶೇಖರಣೆಯಾಗುತ್ತದೆ ಎಂದು ತಿಳಿಸಿದ್ದರು. ಕಳೆದ 30 ವರ್ಷಗಳಿಂದ ನಾನು ನನ್ನ ದನಗಳನ್ನು ಮೇಯಲು ಕರೆದುಕೊಂಡು ಹೋಗುತ್ತಿದ್ದೆ. ಹೀಗೆ ಹೋದವನು ದಿನಾ ಸ್ವಲ್ಪ ಸ್ವಲ್ಪ ಕಾಲುವೆಯನ್ನು ಅಗೆಯುತ್ತಿದ್ದೆ. ಈ ವೇಳೆ ನನಗೆ ಯಾರೂ ಸಹಾಯ ಮಾಡಲಿಲ್ಲ. ಗ್ರಾಮದ ಜನ ತಮ್ಮ ಜೀವನೋಪಾಯಕ್ಕಾಗಿ ಹಳ್ಳಿ ತೊರೆದು ನಗರದ ಕಡೆ ಮುಖ ಮಾಡುತ್ತಿದ್ದಾರೆ. ಆದರೆ ನಾನು ಆ ರೀತಿ ಮಾಡದೇ ಹಳ್ಳಿಯಲ್ಲೇ ಉಳಿದುಕೊಳ್ಳಲು ನಿರ್ಧರಿಸಿರುವುದಾಗಿ ಲೌಂಗಿ ಹೇಳಿದ್ದರು.

ಕೋತಿಲ್ವಾ ಗ್ರಾಮವು ಗಯಾ ಜಿಲ್ಲೆಯಿಂದ 80 ಕಿ.ಮೀ ದೂರದಲ್ಲಿರುವ ದಟ್ಟವಾದ ಕಾಡು ಹಾಗೂ ಪರ್ವತಗಳಿಂದ ಆವೃತವಾಗಿದೆ. ಗಯಾದಲ್ಲಿನ ಜನರ ಜೀವನೋಪಾಯದ ಮುಖ್ಯ ಸಾಧನವೆಂದರೆ ಕೃಷಿ ಮತ್ತು ಪಶುಸಂಗೋಪನೆ ಆಗಿದೆ. ಮಳೆಗಾಲದಲ್ಲಿ ಪರ್ವತಗಳಿಂದ ಬೀಳುವ ನೀರು ನದಿಗೆ ಹರಿಯುತ್ತಿತ್ತು. ಇದು ಲೌಂಗಿ ಅವರನ್ನು ಸಾಕಷ್ಟು ಕಾಡುತ್ತಿದ್ದು, ಹೀಗಾಗಿ ಅವರು ಕಾಲುವೆ ತೋಡಲು ನಿರ್ಧಾರ ಮಾಡಿ, ಯಶಸ್ಸು ಕಂಡಿದ್ದರು.

Comments

Leave a Reply

Your email address will not be published. Required fields are marked *