ಮಾಜಿ ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು ಕಾಂಗ್ರೆಸ್ಸಿಗೆ ಸೇರ್ಪಡೆ

ಬೆಂಗಳೂರು: ಜೆಡಿಎಸ್‍ನ ಮಾಜಿ ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ರಮೇಶ್ ಬಾಬು ಅವರು ಅಧಿಕೃತವಾಗಿ ಕಾಂಗ್ರೆಸ್ ಸೇರಿದ್ದಾರೆ. ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಬಿ.ಕೆ.ಹರಿಪ್ರಸಾದ್ ಉಪಸ್ಥಿತರಿದ್ದರು.

ವಿಧಾನ ಪರಿಷತ್ ಮಾಜಿ ಸದಸ್ಯ ರಮೆಶ್ ಬಾಬು ಅವರು ಆಗ್ನೇಯ ಪದವೀಧರರ ಕ್ಷೇತ್ರದಿಂದ ಜೆಡಿಎಸ್ ಟಿಕೆಟ್ ಕೈ ತಪ್ಪಿರುವ ಹಿನ್ನೆಲೆಯಲ್ಲಿ ಮಾರ್ಚ್ ತಿಂಗಳಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಜಾತ್ಯಾತೀತ ಜನತಾ ದಳ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಷ್ಟ್ರೀಯ ವಕ್ತಾರರು ಆಗಿರುವ ರಮೇಶ್, ಪಕ್ಷದ ವರಿಷ್ಠ ದೇವೇಗೌಡರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದರು.

ಕಾಂಗ್ರೆಸ್ ಸೇರ್ಪಡೆಯ ಬಳಿಕ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, 60 ಹಿರಿಯ ನಾಯಕರು ಪಕ್ಷಕ್ಕೆ ಸೇರುತ್ತೇನೆ ಎಂದು ಅರ್ಜಿ ಹಾಕಿದ್ದಾರೆ. ಇದಕ್ಕೆ ಒಂದು ಸಮಿತಿ ರಚನೆ ಮಾಡಿದ್ದೇವೆ. ಸಮಿತಿ ಮುಂದೆ 60 ಅರ್ಜಿ ಬಂದಿದೆ. ಎಲ್ಲವೂ ಪರಿಶೀಲನೆ ಮಾಡಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತೇವೆ. ರಮೇಶ್ ಬಾಬು ಕೂಡ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತೇನೆಂದು ಅರ್ಜಿ ಹಾಕಿದ್ದರು. ಸದ್ಯ ವಿಧಾನಪರಿಷತ್ ಚುನಾವಣೆ ಬರೋದ್ರಿಂದ ರಮೇಶ್ ಬಾಬು ಕಾಂಗ್ರೆಸ್ ಸೇರ್ಪಡೆಗೆ ನಾವು ಒಪ್ಪಿಕೊಂಡೆವು. ಹೀಗಾಗಿ ಇಂದು ಅಧಿಕೃತವಾಗಿ ರಮೇಶ್ ಬಾಬು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದರು.

ಕೊರೊನಾ ಸಮಯದಲ್ಲಿ 1,600 ಕೋಟಿ ಪ್ಯಾಕೇಜ್ ಘೋಷಣೆ ಮಾಡಿದ್ದರು. ಯಾವ ಯಾವ ಕ್ಷೇತ್ರಗಳಿಗೆ ತಲುಪಿದೆ ಎಂದು ದಾಖಲೆ ನೀಡಲಿ. ಅಧಿವೇಶನದ ಪ್ರಾರಂಭದಲ್ಲಿ ಸಿಎಂ ಮಾಹಿತಿ ನೀಡಲಿ. ಕೇಂದ್ರದಿಂದ ಎಷ್ಟು ಅನುದಾನ ತಂದ್ರು, ಯಾವ ಮಂತ್ರಿಗಳನ್ನ ಭೇಟಿ ಮಾಡಿದ್ದರು. ಈ ಎಲ್ಲ ಮಾಹಿತಿ ಸಿಎಂ ಅಧಿವೇಶನದಲ್ಲಿ ನೀಡಲಿ ಎಂದು ಇದೇ ವೇಳೆ ಡಿಕೆಶಿ ಆಗ್ರಹಿಸಿದರು.

ರಾಜ್ಯದಿಂದ 25-30 ಜನ ಬಿಜೆಪಿ ಸಂಸದರು ಹೋಗಿದ್ದಾರೆ. ಅವರನ್ನೆಲ್ಲ ಕರೆದುಕೊಂಡು ಸಿಎಂ ನಿನ್ನೆ ಹೋಗಬೇಕಿತ್ತು. ಸರ್ವ ಪಕ್ಷ ನಿಯೋಗ ಕರೆದುಕೊಂಡು ಹೋಗಿ ಎಂದು ನಾವು ಸಾಕಷ್ಟು ಮನವಿ ಮಾಡಿದ್ದೇವೆ. ಆದರೂ ನಮ್ಮ ಮನವಿಗೆ ಸಿಎಂ ಬಿಎಸ್‍ವೈ ಸ್ಪಂದಿಸಿಲ್ಲ ಎಂದು ಕಿಡಿಕಾರಿದರು.

Comments

Leave a Reply

Your email address will not be published. Required fields are marked *