ಒಂದೂವರೆ ವರ್ಷದಿಂದ ಬಲೆ ಹಾಕಿ ಕಾಯ್ತಿದ್ದ – ಕೊನೆಗೂ ಪ್ರತೀಕಾರಕ್ಕಾಗಿ ಚಿರತೆ ಕೊಂದ

– ಹಸು ಕಳೆದುಕೊಂಡವನ ಸೇಡಿನ ಕಥೆ

ತಿರುವನಂತಪುರಂ: ವ್ಯಕ್ತಿಯೊಬ್ಬ ತನ್ನ ಹಸುವನ್ನು ಕೊಂದಿದ್ದಕ್ಕೆ ಒಂದೂವರೆ ವರ್ಷದಿಂದ ಕಾದು ಕೊನೆಗೂ ಚಿರತೆಯನ್ನು ಕೊಂದಿರುವ ಘಟನೆ ಕೇರಳದ ಮುನ್ನಾರ್‌ನಲ್ಲಿ ನಡೆದಿದೆ.

ಚಿರತೆಯನ್ನು ಕೊಂದ 34 ವರ್ಷದ ಕುಮಾರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಅರಣ್ಯ ಇಲಾಖೆ ಬಂಧಿಸಿದೆ. ಚಿರತೆ ಆರೋಪಿಯ ಹಸುವನ್ನು ಒಂದು ವರ್ಷದ ಹಿಂದೆ ಕೊಂದ ನಂತರ ಚಿರತೆಗಾಗಿ ಬಲೆ ಹಾಕಿದ್ದನು ಎಂದು ತಿಳಿದು ಬಂದಿದೆ.

ಸೆಪ್ಟೆಂಬರ್ 8 ರಂದು ಕನ್ನಿಮಲಾ ಎಸ್ಟೇಟ್ ಕೆಳ ವಿಭಾಗದಲ್ಲಿ ನಾಲ್ಕು ವರ್ಷದ ಚಿರತೆ ಬಲೆಗೆ ಬಿದ್ದು ಶವವಾಗಿ ಪತ್ತೆಯಾಗಿತ್ತು. ನಂತರ ಅರಣ್ಯ ಇಲಾಖೆ ಚಿರತೆಯ ಸಾವಿನ ಬಗ್ಗೆ ತನಿಖೆ ಆರಂಭಿಸಿತ್ತು. ತನಿಖೆ ವೇಳೆ ಕುಮಾರ್ ಚಿರತೆಯನ್ನು ಕೊಂದಿರುವುದು ಪತ್ತೆಯಾಗಿದ್ದು, ಆತನನ್ನು ಬಂಧಿಸಲಾಗಿದೆ. ಈ ವೇಳೆ ಇದು ಪ್ರತೀಕಾರಕ್ಕಾಗಿ ನಡೆದ ಕಥೆ ಎಂದು ಬಹಿರಂಗವಾಗಿದೆ.

ಕುಮಾರ್ ಹಸು ಹೊಲದಲ್ಲಿ ಮೇಯುತ್ತಿದ್ದಾಗ ಇದೇ ಚಿರತೆ ಹಾಡಹಗಲೇ ಹಸುವಿನ ದಾಳಿ ಮಾಡಿ ಕೊಂದು ಹಾಕಿತ್ತು. ಆ ಹಸು ಕುಮಾರ್ ಜೀವನದ ಆಧಾರವಾಗಿತ್ತು. ಹೀಗಾಗಿ ತನ್ನ ಹಸುವನ್ನು ಕೊಂದು ಚಿರತೆಯ ವಿರುದ್ಧ ಸೇಡು ತೀರಿಸಿಕೊಳ್ಳುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದ ಎಂದು ನೆರೆಹೊರೆಯವರು ಹೇಳಿದ್ದಾರೆ.

ಕುಮಾರ್‌ನ ಸೇಡಿನ ಕಥೆಯನ್ನು ನೆರೆಹೊರೆಯವರು ಅರಣ್ಯ ಸಿಬ್ಬಂದಿಗೆ ತಿಳಿಸಿದ ನಂತರ ಚಿರತೆಯ ಸಾವಿನ ರಹಸ್ಯ ಬಹಿರಂಗವಾಗಿದೆ. ನಾನು ಚಿರತೆಗಾಗಿ ಬಲೆಯನ್ನು ಹಾಕಿದ್ದೆ. ಸುಮಾರು ಕಳೆದ 1.5 ವರ್ಷಗಳಿಂದ ಚಿರತೆಗಾಗಿ ಕಾಯುತ್ತಿದ್ದೆ. ಆಗಾಗ ನಾನು ಹಾಕಿದ್ದ ಬಲೆಯನ್ನು ಪರಿಶೀಲಿಸುತ್ತಿದ್ದೆ. ಕೊನೆಗೆ ಚಿರತೆ ನಾನು ಹಾಕಿದ್ದ ಬಲೆಗೆ ಬಿದ್ದಿದೆ. ಆಗ ಚಿರತೆಯನ್ನು ಚಾಕುವಿನಿಂದ ಇರಿದು ಕೊಂದಿದ್ದೇನೆ ಎಂದು ಆರೋಪಿ ಕುಮಾರ್ ಅರಣ್ಯ ಸಿಬ್ಬಂದಿಗೆ ತಿಳಿಸಿದ್ದಾನೆ.

ಮುನ್ನಾರ್ ಎಸಿಎಫ್ ಸಜೀಶ್ ಕುಮಾರ್ ಮತ್ತು ಶ್ರೇಣಿ ಅಧಿಕಾರಿ ಎಸ್.ಹರೀಂದ್ರನಾಥ್ ತಂಡ ಆರೋಪಿಯನ್ನು ಬಂಧಿಸಿದೆ. ಸದ್ಯಕ್ಕೆ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Comments

Leave a Reply

Your email address will not be published. Required fields are marked *