ಚೀನಾ ದಾಳಿ ಎದುರಿಸಲು ಭಾರತ ಸಮರ್ಥವಾಗಿದೆ – ರಾಜನಾಥ್ ಸಿಂಗ್

ನವದೆಹಲಿ : ಪೂರ್ವ ಲಡಾಖ್‌ ಗಡಿಯಲ್ಲಿ ಚೀನಾ ಹೆಚ್ಚುವರಿ ಸೇನೆ ನಿಯೋಜನೆ ಮಾಡಿದ್ದು, ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದೆ‌. ಈ ಪರಿಸ್ಥಿತಿಯನ್ನು ನಿಭಾಯಸಿಲು ಭಾರತೀಯ ಸೇನೆ ಸಮರ್ಥವಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭಾರತ ಚೀನಾ ಗಡಿಯಲ್ಲಿ ನಿರ್ಮಾಣವಾಗಿರುವ ಉದ್ವಿಗ್ನ ಪರಿಸ್ಥಿತಿ ಸಂಬಂಧ ಲೋಕಸಭೆಗೆ ಇಂದು ರಾಜನಾಥ್ ಸಿಂಗ್ ಪ್ರತಿಕ್ರಿಯೆ ನೀಡಿದರು‌. ಪಾಂಗಾಂಗ್ ತ್ಸೊ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆಗಳು, ಗೊಗ್ರಾ ಮತ್ತು ಪೂರ್ವ ಲಡಾಕ್ ಘರ್ಷಣೆ ಕೇಂದ್ರಗಳಾಗಿವೆ. ಇದಕ್ಕೆ ಪ್ರತ್ಯುತ್ತರ ನೀಡಲು ಭಾರತೀಯ ಸೇನೆಯನ್ನು ನಿಯೋಜನೆ ಮಾಡಲಾಗಿದೆ ಎಂದರು.

ಹಳೆ ಒಪ್ಪಂದವನ್ನು ಉಲ್ಲಂಘಿಸಿ, ಜೂನ್ 15 ರಂದು ಗಾಲ್ವಾನ್‌ನಲ್ಲಿ ಚೀನಾವು ಹಿಂಸಾತ್ಮಕ ಸಂಘರ್ಷದ ಪರಿಸ್ಥಿತಿಯನ್ನು ಸೃಷ್ಟಿಸಿತು. ನಮ್ಮ ಧೈರ್ಯಶಾಲಿ ಸೈನಿಕರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು. ಈ ವೇಳೆ ಚೀನಾದ ಕಡೆಯವರಿಗೆ ಹೆಚ್ಚಿನ ಹಾನಿ ಉಂಟು ಮಾಡಿ ನಮ್ಮ ಗಡಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾದರು ಎಂದು ವಿವರಿಸಿದರು.

ಗಡಿಯ ವಿಚಾರ ನಿಭಾಯಿಸಲು ಕೇಂದ್ರ ಸರ್ಕಾರ ಬದ್ದವಾಗಿದೆ. ಎರಡು ದೇಶಗಳು ಮಿಲಿಟರಿ ಮತ್ತು ರಾಜತಾಂತ್ರಿಕ ಮಾತುಕತೆ ನಡೆಸುತ್ತಿವೆ. ಚೀನಾ ರಕ್ಷಣಾ ಸಚಿವರ ಭೇಟಿ ವೇಳೆ ನಮ್ಮ ಸೇನೆ ಗಡಿ ನಿರ್ವಹಣೆ ವಿಚಾರದಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಂಡಿದೆ ಎಂದು ತಿಳಿಸಿದೆ. ಈ ವೇಳೆ ಭಾರತ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆ ರಕ್ಷಿಸುವ ಸಂಕಲ್ಪದ ಬಗ್ಗೆಯೂ ಪ್ರಸ್ತಾಪಿಸಿದೆ.

ಗಡಿಯಲ್ಲಿ ವಿಚಾರಗಳಲ್ಲಿ‌ ನಿರೀಕ್ಷಿತ ಮಟ್ಟದಲ್ಲಿ ಪರಿಹಾರ ದೊರಕಿಲ್ಲ ಭಾರತದ ಬೇಡಿಕೆಗಳನ್ನು ಚೀನಾ ಒಪ್ಪಿಕೊಂಡಿಲ್ಲ, ಅಗಸ್ಟ್ 29, 30ರ ರಾತ್ರಿ ಯಥಾಸ್ಥಿತಿ ಉಲ್ಲಂಘಿಸುವ ಪ್ರಯತ್ನ ಮಾಡಿತ್ತು‌. ಅದನ್ನು ತಡೆಗಟ್ಟುವ ಕೆಲಸವನ್ನು ನಮ್ಮ ಸೇನೆ ಮಾಡಿದೆ. ಈ ದಾಳಿ ಮಾಡುವ ಮೂಲಕ ಚೀನಾ ಹಳೆ ಒಪ್ಪಂದಗಳನ್ನು ಉಲ್ಲಂಘಿಸಿದೆ ಎಂದು ರಾಜನಾಥ್ ಸಿಂಗ್ ಹೇಳಿದರು.

ಸಂಕಷ್ಟದ ವೇಳೆಯಲ್ಲಿ ನಮ್ಮ ಸೈನಿಕರಲ್ಲಿ ಉತ್ಸಾಹ ಕುಂದಿಲ್ಲ, 0 ಡಿಗ್ರಿ ವಾತಾವರಣದಲ್ಲೂ ಎಲ್ಲ ಹಂತಕ್ಕೂ ತಯರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಗಡಿ ಭೇಟಿ ನೀಡಿದ್ದರು. ಈ ವೇಳೆ ಇಡೀ ದೇಶದ ಜನರು, ಸೈನಿಕರ ಜೊತೆಗಿದ್ದಾರೆ ಎನ್ನುವ ಸಂದೇಶ ಪ್ರಧಾನಿ ಸಾರಿದ್ದಾರೆ. ಪ್ರಧಾನಿ ಭೇಟಿ ಬಳಿಕ ಸೈನಿಕರಲ್ಲಿ ಹುಮ್ಮಸ್ಸು ದುಪ್ಪಟ್ಟಾಗಿದೆ ಜೀವದ ಹಂಗು ತೊರೆದು ದೇಶದ ಸೇವೆ ಮಾಡಿತ್ತಿದ್ದಾರೆ ಎಂದು ಸೈನಿಕರನ್ನು ರಾಜನಾಥ್‌ ಸಿಂಗ್‌ ಶ್ಲಾಘಿಸಿದರು.

Comments

Leave a Reply

Your email address will not be published. Required fields are marked *