ದಿನ ಬೆಳಗ್ಗೆ ಎದ್ದರೆ ದೇವರು ನೋಡುವುದು ಬಿಟ್ಟು ಅದು ನೋಡುವುದೇ ಆಗಿದೆ: ರೇವಣ್ಣ

– ಜನ ಸಾಯುತ್ತಿದ್ದಾರೆ ಕೊರೊನಾ ಬಗ್ಗೆ ತೋರಿಸಿ
– ಮಾಧ್ಯಮಗಳ ವಿರುದ್ಧ ಹೆಚ್‍ಡಿಆರ್ ಬೇಸರ

ಹಾಸನ: ದಿನ ಬೆಳಗ್ಗೆ ಎದ್ದರೆ ದೇವರು ನೋಡುವುದು ಬಿಟ್ಟು ಅದು ನೋಡುವುದೇ ಆಗಿದೆ. ದಯಮಾಡಿ ದಿನ ಬರುತ್ತಿರುವುದನ್ನು ನಿಲ್ಲಿಸಿ ಎಂದು ಮಾಧ್ಯಮಗಳ ವಿರುದ್ಧ ಮಾಜಿ ಸಚಿವ ಹೆಚ್‍ಡಿ.ರೇವಣ್ಣ ಬೇಸರ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳಲ್ಲಿ ಬರುತಿರುವ ಡ್ರಗ್ಸ್ ದಂಧೆ ಬಗ್ಗೆ ತೋರಿಸುತ್ತಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಅದರ ಬಗ್ಗೆ ಒಂದು ವಾರ ತೋರಿಸಿದ್ದೀರಿ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ನಿಜ. ಹಾಗಾದರೆ ಈ ರಾಜ್ಯದಲ್ಲಿ ಬೇರೆ ಏನೂ ಇಲ್ಲವೇ? ಕೊರೊನಾದಿಂದ ದಿನ ಜನರು ಸಾಯುತ್ತಿದ್ದಾರೆ. ಹಲವು ಸಮಸ್ಯೆಗಳಿವೆ. ಅದರ ಬಗ್ಗೆ ತೋರಿಸಿ ಎಂದರು.

ರಾಜ್ಯದ ಎಲೆಕ್ಟ್ರಾನಿಕ್ ಮೀಡಿಯಾಗೆ ಒಳ್ಳೇ ಹೆಸರಿದೆ. ಮಾಧ್ಯಮದವರು ಸರ್ಕಾರ ತಪ್ಪು ಮಾಡಿದಾಗ ಎಚ್ಚರಿಸಬೇಕು. ರಾಜ್ಯಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ತಪ್ಪು ಮಾಡಿದಾಗ ಮಾಧ್ಯಮ ಎಚ್ಚರಿಸಬೇಕು. ಜೊತೆಗ ಹಾಸನ ಜಿಲ್ಲೆಯಲ್ಲಿ ಕೆಲವು ಅಧಿಕಾರಿಗಳು ಕಾನೂನು ಬಾಹಿರವಾಗಿ ಕೆಲಸ ಮಾಡುತ್ತಿದ್ದಾರೆ. ಇಂತಹ ಕೆಲಸಗಳಿಗೆ ಅವಕಾಶ ಮಾಡಿಕೊಡಬೇಡಿ ಎಂದು ಸರ್ಕಾರಕ್ಕೆ, ಅಧಿಕಾರಿಗಳಿಗೆ ಎಚ್ಚರಿಕೆ ನೀಡುತ್ತೇನೆ. ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ ಎಲ್ಲವನ್ನೂ ಬಹಿರಂಗಪಡಿಸುತ್ತೇನೆ ಎಂದು ರೇವಣ್ಣ ಕಿಡಿಕಾರಿದ್ದಾರೆ.

ಇದೇ ವೇಳೆ ಜಮೀರ್ ಅಹಮದ್ ಜೊತೆ ಜೆಡಿಎಸ್ ಶಾಸಕರು ಶ್ರೀಲಂಕಾಕ್ಕೆ ಹೋಗಿ ಬಂದ ವಿಚಾರದ ಬಗ್ಗೆ ಮಾತನಾಡುತ್ತ, ನನಗೆ ಹಾಸನ, ಹೊಳೆನರಸೀಪುರ, ಬೆಂಗಳೂರು ಯಾವುದಾದರೂ ಮೀಟಿಂಗ್ ಇದ್ದಾಗ ಹೋಗುತ್ತೇನೆ. ಆದರೆ ಶ್ರೀಲಂಕಾ ಕ್ಯಾಸಿನೋ ಬಗ್ಗೆ ನನಗೆ ಗೊತ್ತಿಲ್ಲ. ಕ್ಯಾಸಿನೋ ನಡೆಸುವವರೇ ಸರ್ಕಾರ ಉರುಳಿಸಿದ್ದು ಮುಗಿದು ಹೋದ ವಿಚಾರ ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *