ಎಮ್ಮೆ ಸತ್ತಿದೆ ಎಂದು ರಾತ್ರೋರಾತ್ರಿ ಜೆಸಿಬಿ ತರಿಸಿದ್ಲು- ಪತಿಯ ಶವವನ್ನೇ ಹೂಳಿದ ಕಿರಾತಕಿ ಪತ್ನಿ

– ತಲೆಗೆ ಹೊಡೆದು, ಕುತ್ತಿಗೆಯನ್ನ ಹಗ್ಗದಿಂದ ಬಿಗಿದು ಕೊಲೆ

ಚಿಕ್ಕೋಡಿ/ಬೆಳಗಾವಿ: ಪತಿಯನ್ನು ಕೊಲೆಗೈದು ಎಮ್ಮೆ ಸತ್ತಿದೆ ಎಂದು ಸುಳ್ಳು ಹೇಳಿ ಜೆಸಿಬಿ ತರಿಸಿದ ಪತ್ನಿ. ನಂತರ ಗುಂಡಿ ತೋಡಿ ಶವವನ್ನು ಹೂತು ಹಾಕಿ ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸಿರುವ ಘಟನೆ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ನಡೆದಿದೆ.

ಸಚಿನ್ ಸದಾಶಿವ ಭೋಪಳೆ (35) ಕೊಲೆಯಾದ ಪತಿ. ಹಂಚಿನಾಳ ಗ್ರಾಮದ ಪತ್ನಿ ಅನಿತಾ ಭೋಪಳೆ ಕೊಲೆ ಮಾಡಿದ್ದು, ದುಷ್ಕೃತ್ಯಕ್ಕೆ ಆಕೆಯ ಸಹೋದರರಾದ ಕೃಷ್ಣ ರಾಜಾರಾಮ ಘಾಟಗೆ, ಗಣೇಶ ಅಣ್ಣಪ್ಪ ರೇಡೆಕರ ಮತ್ತು ಸಹೋದರಿ ವನಿತಾ ಚೌವಾಣ ಮೂವರು ಸಾಥ್ ನೀಡಿದ್ದಾರೆ. ಸದ್ಯಕ್ಕೆ ಆರೋಪಿಗಳು ಪರಾರಿಯಾಗಿದ್ದು, ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

ಮೃತ ಸಚಿನ್ ಸದಾಶಿವ ಭೋಪಳೆ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕಾಗಲ್ ತಾಲೂಕಿನ ನೇರ್ಲೆ ಗ್ರಾಮದ ನಿವಾಸಿಯಾಗಿದ್ದು, ಪತ್ನಿಯ ಶೀಲವನ್ನು ಶಂಕಿಸಿ ಪ್ರತಿದಿನಲೂ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಕೆಲ ದಿನಗಳ ಹಿಂದೆ ಗಂಡ ಹೆಂಡತಿ ಇಬ್ಬರೂ ಹಂಚಿನಾಳ ಗ್ರಾಮಕ್ಕೆ ಬಂದಿದ್ದರು.

ಸೆಪ್ಟೆಂಬರ್ 3 ರಂದು ರಾತ್ರಿ ಮತ್ತೆ ಇದೇ ವಿಚಾರಕ್ಕೆ ಜಗಳ ನಡೆದಿದೆ. ಆಗ ಜಗಳದಲ್ಲಿ ಪತ್ನಿ ದೊಣ್ಣೆಯಿಂದ ಪತಿಯ ತಲೆಗೆ ಜೋರಾಗಿ ಹೊಡೆದಿದ್ದಾಳೆ. ನಂತರ ಕುತ್ತಿಗೆಯನ್ನು ಹಗ್ಗದಿಂದ ಬಿಗಿದು ಕೊಲೆ ಮಾಡಿದ್ದಾಳೆ. ಬಳಿಕ ಅನಿತಾ ಇತರ ಮೂವರು ಆರೋಪಿಗಳ ಜೊತೆ ಸೇರಿ ಮನೆಯಲ್ಲಿ ಎಮ್ಮೆ ಸತ್ತಿದೆ ಎಂದು ರಾತ್ರೋರಾತ್ರಿ ಜೆಸಿಬಿ ತರಿಸಿದ್ದಾಳೆ. ನಂತರ ಗುಂಡಿ ತೋಡಿಸಿ ಪತಿಯ ಶವವನ್ನು ಹೂತಿದ್ದಾರೆ ಎಂಬುದು ತನಿಖೆ ವೇಳೆ ತಿಳಿದುಬಂದಿದೆ.

ಜೆಸಿಬಿ ಚಾಲಕ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದನು. ನಂತರ ಈ ಪ್ರಕರಣದ ಬಗ್ಗೆ ತನಿಖೆ ಆರಂಭಿಸಿದ ಪೊಲೀಸರು, ಡಿವೈಎಸ್‍ಪಿ ಮನೋಜ್ ಕುಮಾರ್ ಸೇರಿದಂತೆ ಅನೇಕ ಅಧಿಕಾರಿಗಳು ಸ್ಥಳ ಪರೀಶಿಲನೆ ನಡೆಸಿ ಮೃತದೇಹವನ್ನ ಹೊರ ತೆಗೆದಿದ್ದಾರೆ. ಸದ್ಯಕ್ಕೆ ಈ ಕುರಿತು ನಿಪ್ಪಾಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *