ಕಾಂಗ್ರೆಸ್ ಇಂದು ವೃದ್ಧಾಶ್ರಮವಾಗುತ್ತಿದೆ: ನಳಿನ್ ಕುಮಾರ್ ಕಟೀಲ್

ಕಲಬುರಗಿ: ಕಾಂಗ್ರೆಸ್ ಇಂದು ವೃದ್ಧಾಶ್ರಮವಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿಗರಿಗೆ ಪಕ್ಷದ ಅಧ್ಯಕ್ಷರನ್ನು ನೇಮಕ ಮಾಡಲು ಆಗುತ್ತಿಲ್ಲ. ಈ ಮೂಲಕ ಕಾಂಗ್ರೆಸ್ ವೃದ್ಧಾಶ್ರಮವಾಗುತ್ತಿದೆ ಎಂದು ತಿಳಿಸಿದ್ದಾರೆ.

ಸಿದ್ದರಾಮಯ್ಯ ಸಿಎಂ ಅವಧಿಯ ಹಗರಣಗಳನ್ನು ಬಯಲಿಗೆಳೆಯುತ್ತೇವೆ. ಕಾಂಗ್ರೆಸ್ ಅಧಿಕಾರದಲ್ಲಿ ಇಲ್ಲದೇ ಇದ್ದಾಗ ಗೊಂದಲ ಸೃಷ್ಟಿಸುತ್ತದೆ. ಕಾಂಗ್ರೆಸ್ ನಾಯಕರು ಗೊಂದಲ ಸೃಷ್ಟಿಸಿ ಬೆಂಕಿ ಹಚ್ಚಿ ಸುಖ ಅನುಭವಿಸುತ್ತಾರೆ. ಡಿಜೆ ಹಳ್ಳಿ ಗಲಭೆ ಕಾಂಗ್ರೆಸ್ಸಿನ ಆಂತರಿಕ ಗೊಂದಲದಿಂದ ಆಗಿದ್ದು ಎಂದು ನಳಿನ್ ಹೇಳಿದ್ದಾರೆ.

ಇದೇ ವೇಳೆ ಟಿಪ್ಪು ಬಗ್ಗೆ ಎಂಎಲ್‍ಸಿ ವಿಶ್ವನಾಥ್ ಹೇಳಿಕೆ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅವರು, ಅದು ಅವರ ವೈಯಕ್ತಿಕ ವಿಚಾರವಾಗಿದೆ. ಬಿಜೆಪಿ ಟಿಪ್ಪು ವಿರುದ್ಧ ಹೋರಾಡುತ್ತಾ ಬಂದಿದೆ. ಟಿಪ್ಪುವಿನ ವಿಚಾರದಲ್ಲಿ ಬಿಜೆಪಿಗೆ ಸ್ಪಷ್ಟ ನಿಲುವಿದೆ. ವಿಶ್ವನಾಥ್ ಅವರ ಹೇಳಿಕೆ ಬಗ್ಗೆ ವಿವರಣೆ ಪಡೆಯುತ್ತೇನೆ ಎಂದರು.

ಸಿಎಂ ಪುತ್ರ ವಿಜಯೇಂದ್ರ ಸೂಪರ್ ಸಿಎಂ ಅನ್ನೋ ಕಾಂಗ್ರೆಸ್ ಆರೋಪ ಸಂಬಂಧ ಮಾತನಾಡಿದ ಅವರು, ಯಡಿಯೂರಪ್ಪರಂತಹ ನಾಯಕ ಕಾಂಗ್ರೆಸ್ಸಿನಲ್ಲಿಯೂ ಇಲ್ಲ. ಯಡಿಯೂರಪ್ಪ ದಕ್ಷರಿದ್ದಾರೆ.ಸಮರ್ಥವಾಗಿ ಆಡಳಿತ ನಡೆಸುತ್ತಿದ್ದಾರೆ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *