ಅದೃಷ್ಟದ ಕಲ್ಲೆಂದು ಮಾರಲು ಯತ್ನಿಸಿದ ಆರೋಪಿಗಳು ಅಂದರ್

– ದಂಧೆಯ ಮಾಸ್ಟರ್ ಮೈಂಡ್‍ಗಾಗಿ ಹುಡುಕಾಟ
– ಬಂಧಿತರು ಆಟೋ ಡ್ರೈವರ್ ಆಗಿ ಕೆಲಸ

ಬೆಂಗಳೂರು: ಹಸಿರು ಬಣ್ಣದ ಕಲ್ಲನ್ನು ಅದೃಷ್ಟದ ಕಲ್ಲೆಂದು ಮಾರಲು ಯತ್ನಿಸಿದ ಮೂವರು ಆರೋಪಿಗಳನ್ನು ಬ್ಯಾಡರಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಶ್ರೀನಿವಾಸ್, ಹರೀಶ್, ತಿರುಪತಪ್ಪ ಬಂಧಿತ ಆರೋಪಿಗಳು. ಮೂಲತಃ ಅವಲಹಳ್ಳಿ, ರಾಮಮೂರ್ತಿನಗರ ಮತ್ತು ಮಾರಗೊಂಡನಹಳ್ಳಿ ನಿವಾಸಿಗಳು ಎಂದು ತಿಳಿದುಬಂದಿದೆ. ಈ ದಂಧೆಯ ಹಿಂದಿರುವ ಮಾಸ್ಟರ್ ಮೈಂಡ್ ಮನ್ಸೂರ್ ತಲೆಮರೆಸಿಕೊಂಡಿದ್ದಾನೆ. ಬಂಧಿತನ ಆರೋಪಿಗಳಿಂದ 1 ಕೆ.ಜಿ ಕಲ್ಲು ಹಾಗೂ ಆಟೋವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಶನಿವಾರ ಸಂಜೆ ಅಂಜನಾನಗರ ಮುಖ್ಯ ರಸ್ತೆಯಲ್ಲಿ ಅದೃಷ್ಟದ ಕಲ್ಲೆಂದು ಆರೋಪಿಗಳು ದಂಧೆಗಿಳಿದಿದ್ದರು. ಅವೆಂಚರ್ಸ್ ಸ್ಟೋನ್‍ನ ಮಾರಾಟ ಮಾಡಲು ಮುಂದಾಗಿದ್ದರು. ಇದನ್ನ ಮನೆಯಲ್ಲಿಟ್ಟು ಪೂಜೆ ಮಾಡಿದರೆ ಅದೃಷ್ಟ ಬರುತ್ತೆ. ಮನೆಯಲ್ಲಿ ಹಣದ ಹೊಳೆ ಹರಿಯುತ್ತದೆ ಎಂದು ಹೇಳುವ ಮೂಲಕ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದರು. ಇದರ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಅಧಿಕಾರಿಗಳು ಆರೋಪಿಗಳ ಬೆನ್ನತ್ತಿ ಮೂರು ದಿನಗಳ ಕಾಲ ಕಾರ್ಯಾಚರಣೆ ನಡೆಸಿದ್ದರು.

ಆರೋಪಿಗಳು ಪ್ರತಿ ಸಂಜೆ ಈ ರೀತಿ ಕಲ್ಲನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ಮಾಡಿ ಬಂಧಿಸಿದ್ದಾರೆ. ಆದರೆ ಮಾಸ್ಟರ್ ಮೈಂಡ್ ಮನ್ಸೂರ್ ತಲೆಮರೆಸಿಕೊಂಡಿದ್ದಾನೆ. ಮನ್ಸೂರ್ ಆರ್.ಟಿ. ನಗರದ ನಿವಾಸಿಯಾಗಿದ್ದು, ಈತ ಆರೋಪಿಗಳಿಗೆ 1 ಕೆ.ಜಿ ತೂಕದ ಹಸಿರು ಬಣ್ಣದ ಕಲ್ಲನ್ನ ಕೊಟ್ಟಿದ್ದನು. ಅಲ್ಲದೇ ಈ ಕಲ್ಲನ್ನ 1 ಕೋಟಿಗೆ ಮಾರಾಟ ಮಾಡಿ ಎಂದು ಹೇಳಿದ್ದನು.

ಮಾರಾಟ ಮಾಡಿ ಬಂದ ಹಣದಲ್ಲಿ ಪಾಲು ನೀಡುವುದಾಗಿ ಆರೋಪಿ ಮನ್ಸೂರ್ ಆಸೆ ಹುಟ್ಟಿಸಿದ್ದನು. ದುಡ್ಡಿನ ಆಸೆಗಾಗಿ ಆರೋಪಿಗಳು ಈ ಕೆಲಸಕ್ಕೆ ಕೈ ಹಾಕಿದ್ದರು. ಬಂಧಿತ ಆರೋಪಿಗಳೆಲ್ಲರೂ ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ. ಸದ್ಯಕ್ಕೆ ಮನ್ಸೂರ್ ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಈ ಕುರಿತು ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *