ಕೆಆರ್‌ಎಸ್‌ಗೆ 5ನೇ ಬಾರಿ ಸಿಎಂ ಬಾಗಿನ ಅರ್ಪಣೆ – ಇದು ನನ್ನ ಸೌಭಾಗ್ಯವೆಂದ ಬಿಎಸ್‍ವೈ

ಮಂಡ್ಯ: ಕೆಆರ್‌ಎಸ್‌ ಡ್ಯಾಂ ತುಂಬಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಐದನೇ ಬಾರಿಗೆ ಬಾಗಿನ ಅರ್ಪಿಸಿ, ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದರು.

ಭಾನುಪ್ರಕಾಶ್ ನೇತೃತ್ವದಲ್ಲಿ ಪೂಜೆ ನಡೆದಿದ್ದು, ಸಿಎಂ ಯಡಿಯೂರಪ್ಪ ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿ ಸಂತೋಷ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಸಿಎಂ, ಐದನೇ ಬಾರಿಗೆ ಬಂದು ನಾನು ಕೆಆರ್‌ಎಸ್‌ಗೆ ಬಾಗಿನ ನೀಡಿದ್ದೇನೆ. ಇದು ನನ್ನ ಸೌಭಾಗ್ಯವಾಗಿದೆ. ಪ್ರತಿ ವರ್ಷವೂ ಇದೇ ರೀತಿ ಕಾವೇರಿ ತುಂಬಿ ಹರಿಯಲಿ. ಈ ನಾಡಿನ ರೈತರಿಗೆ ಅನುಕೂಲವಾಗಲೆಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ವಿಶೇಷ ಎಂದರೆ ಗೌರಿ-ಗಣೇಶ ಹಬ್ಬದಂದು ಬಾಗಿನ ನೀಡುವ ಸೌಭಾಗ್ಯ ನನಗೆ ಸಿಕ್ಕಿದೆ. ರಾಜ್ಯದ ಎಲ್ಲಾ ಜಲಾಶಯಗಳು ತುಂಬಿ ತುಳುಕುತ್ತಿವೆ. ಈ ವರ್ಷ ರೈತ ಅತ್ಯಂತ ಸಂತೋಷದಿಂದ ಬೆಳೆ ಬೆಳೆಯಲು ಅನುಕೂಲವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ವರುಣ ದೇವ ಪ್ರತಿ ವರ್ಷ ಇದೇ ರೀತಿ ಕೃಪೆ ತೋರಬೇಕು. ಇದರಿಂದ ಮಳೆ-ಬೆಳೆಯಾಗಿ ರೈತ ಸಂತಸದಿಂದ ಇರುತ್ತಾನೆ. ರೈತರ ಅನುಕೂಲಕ್ಕೆ ಸಾಕಷ್ಟು ಯೋಜನೆಯನ್ನು ಮಾಡಿದ್ದೇವೆ. ಮುಂದೆ ಹಣಕಾಸಿನ ಸ್ಥಿತಿಗತಿ ನೋಡಿಕೊಂಡು ಮತ್ತಷ್ಟು ಮಾಡುತ್ತೇವೆ. ರಾಜ್ಯದ ಎಲ್ಲಾ ಜಲಾಶಯಗಳು ತುಂಬಿವೆ. ಇದರಿಂದ ರೈತರು ಒಳ್ಳೆಯ ಬೆಳೆ ಬೆಳೆಯಲಿದ್ದಾರೆ. ಅತಿವೃಷ್ಠಿಯಾದ ಕಡೆಗೆ ಸೂಕ್ತ ಪರಿಹಾರ ನೀಡುತ್ತೇನೆ ಎಂದು ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ ಸ್ಪಷ್ಟಪಡಿಸದರು.

ಕೆಆರ್‌ಎಸ್‌ನ ಪುನಶ್ಚೇತನ ಕಾಮಗಾರಿ ಪೂರ್ಣಗೊಂಡಿದೆ. ಇದೀಗ ಇದು ಪ್ರಮುಖ ಪ್ರವಾಸಿ ತಾಣವಾಗಿದೆ. ಇದನ್ನು ವಿಶ್ವ ದರ್ಜೆಗೆ ಏರಿಸಲು ಕ್ರಮ ತೆಗೆದುಕೊಳ್ಳುತ್ತೇನೆ. ಡ್ಯಾಂನ ಸುರಕ್ಷತೆಗೆ ಗೇಟುಗಳ ಬದಲಾವಣೆ ಮಾಡಲಾಗಿದೆ. ನೀರಾವರಿಗೆ ಸರ್ಕಾರ ಬದ್ಧವಾಗಿದ್ದು, 74 ಸಾವಿರ ಕೋಟಿ ಯೋಜನೆಗೆ ಮಂಜೂರಾತಿ ನೀಡಿದ್ದೇವೆ ಎಂದರು.

Comments

Leave a Reply

Your email address will not be published. Required fields are marked *