ಮಗುವನ್ನ ನೀರಿನಲ್ಲಿ ಮುಳುಗಿಸಿ ತಾಯಿ ಕೂಡ ಆತ್ಮಹತ್ಯೆ – ಪತಿಯ ಫೋನ್ ಸ್ವಿಚ್ ಆಫ್

ರಾಯಚೂರು: ಐದು ತಿಂಗಳ ಕಂದನನ್ನು ನೀರಿನಲ್ಲಿ ಮುಳುಗಿಸಿ ತಾನೂ ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ನಡೆದಿದೆ.

ಜಾನಕಿ (27) ನೇಣಿಗೆ ಶರಣಾದ ಮಹಿಳೆ. ಮಾನ್ವಿ ಪಟ್ಟಣದ ಕೋನಾಪೂರ ಪೇಟೆಯ 7ನೇ ವಾರ್ಡಿನಲ್ಲಿ ಈ ಘಟನೆ ನಡೆದಿದೆ. ಮೊದಲಿಗೆ ತನ್ನ ಐದು ತಿಂಗಳ ಮಗು ರಾಘವೇಂದ್ರನನ್ನ ನೀರಿನಲ್ಲಿ ಮುಳುಗಿಸಿ ಸಾಯಿಸಿದ್ದಾಳೆ. ನಂತರ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮೃತ ಮಹಿಳೆಯ ಪತಿ ಹುಲಿಗೆಪ್ಪ ಮೊಬೈಲ್ ಸ್ವಿಚ್ ಆಫ್ ಮಾಡಿದ್ದು, ಪತಿ ನಾಪತ್ತೆ ಆಗಿರುವುದರಿಂದ ಸಾವಿನ ಸುತ್ತ ಅನುಮಾನ ಮೂಡಿದೆ. ಈ ಘಟನೆಗೆ ಕೌಟುಂಬಿಕ ಕಲಹವೇ ಕಾರಣ ಎಂದು ಹೇಳಲಾಗುತ್ತಿದೆ. ಆದರೆ ಘಟನೆಗೆ ಇನ್ನೂ ನಿಖರವಾದ ಕಾರಣ ತಿಳಿದು ಬಂದಿಲ್ಲ. ಹೀಗಾಗಿ ತಾಯಿ ಮಗುವಿನ ಸಾವಿನ ಪ್ರಕರಣ ಹಲವಾರು ಅನುಮಾನಗಳನ್ನ ಮೂಡಿಸಿದೆ.

ಮಾಹಿತಿ ತಿಳಿದು ಸ್ಥಳಕ್ಕೆ ಮಾನ್ವಿ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮಾನ್ವಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಮಹಿಳೆಯ ಪತಿ ಹಾಗೂ ಸಂಬಂಧಿಕರು ಬಂದ ಬಳಿಕ ವಿಚಾರಣೆ ಮುಂದುವರಿಸುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *