4 ತಿಂಗಳ ಹಿಂದೆಯಷ್ಟೆ ಪ್ರೀತಿಸಿ ಮದ್ವೆ – ನೇಣು ಬಿಗಿದ ಸ್ಥಿತಿಯಲ್ಲಿ ಯುವತಿ ಪತ್ತೆ

ಹಾಸನ: ಪ್ರೀತಿಸಿ ನಾಲ್ಕು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಯುವತಿಯೊಬ್ಬಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಸಾಲಗಾಮೆ ಹೋಬಳಿ ಗೌಡಗೆರೆ ಗ್ರಾಮದ ಪ್ರಿಯಾಂಕಾ (23) ಮೃತ ಗೃಹಿಣಿ. ಆಕೆಯ ಗಂಡ ಹಾಗೂ ಅತ್ತೆ-ಮಾವ ಸೇರಿಕೊಂಡು ವರದಕ್ಷಿಣೆ ಕಿರುಕುಳ ಕೊಟ್ಟು ಕೊಲೆ ಮಾಡಿ, ನೇಣು ಬಿಗಿದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಪ್ರಿಯಾಂಕಾ ಆಲೂರು ತಾಲೂಕಿನ ಪುರಬೈರವನಹಳ್ಳಿ ಗ್ರಾಮದ ಕಿರಣ್ ಜೊತೆ ಕಳೆದ ನಾಲ್ಕು ತಿಂಗಳ ಹಿಂದೆ ಮದುವೆಯಾಗಿದ್ದಳು. ನಮ್ಮ ಮಗಳಿಗೆ ಆಕೆಯ ಗಂಡ ಹಾಗೂ ಅತ್ತೆ, ಮಾವ ವರದಕ್ಷಿಣೆ ತಂದುಕೊಡು ಎಂದು ಕಿರುಕುಳ ನೀಡುತ್ತಿದ್ದರು. ಕೊನೆಗೆ ಆಗಸ್ಟ್ 5 ರಂದು ನಮ್ಮ ಮಗಳನ್ನು ಕೊಲೆ ಮಾಡಿದ್ದಾರೆ. ನಂತರ ಆಕೆಯೇ ಆತ್ಮಹತ್ಯೆ ಮಾಡಿಕೊಂಡಿರುವ ರೀತಿಯಲ್ಲಿ ನೇಣು ಬಿಗಿದಿದ್ದಾರೆ ಎಂದು ಪ್ರಿಯಾಂಕಾ ಸಂಬಂಧಿಕರು ಆರೋಪ ಮಾಡಿದ್ದಾರೆ.

ಈ ಪ್ರಕರಣಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಆಲೂರು ಪೊಲೀಸರು ಪ್ರಿಯಾಂಕಾಳ ಪತಿ ಕಿರಣ್, ಆತನ ತಂದೆ ಲೋಕೇಶ್ ಹಾಗೂ ತಾಯಿ ರುಕ್ಮಿಣಿ ಮೂವರನ್ನು ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರಿಸಿದ್ದಾರೆ.

ಮದುವೆಯಾದ ನಂತರ ನನ್ನ ಮಗಳ ಪತಿ ಮತ್ತೊಂದು ಯುವತಿಯನ್ನು ಪ್ರೀತಿಸುತ್ತಿದ್ದು, ತನ್ನ ಮಗಳಿಗೆ ಮೋಸ ಮಾಡುತ್ತಿದ್ದ ಎಂದು ಪ್ರಿಯಾಂಕಾಳ ತಂದೆ ಆರೋಪಿಸಿದ್ದಾರೆ. ಸದ್ಯಕ್ಕೆ ಈ ಕುರಿತು ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *