ರಾಮ ಮಂದಿರದ ಬಗ್ಗೆ ವಿವಾದಿತ ಟ್ವೀಟ್- ಅಸಾದುದ್ದೀನ್ ಓವೈಸಿ ವಿರುದ್ಧ ದೂರು ದಾಖಲು

– ದೆಹಲಿ ಪೊಲೀಸರಿಗೆ ಹಿಂದೂ ಸೇನೆ ದೂರು

ನವದೆಹಲಿ: ಶ್ರೀ ರಾಮ ಜನ್ಮ ಭೂಮಿ ಕುರಿತು ವಿವಾದಾತ್ಮಕ ಪೋಸ್ಟ್ ಮಾಡಿದ ಎಐಎಂಐಎಂ ಮುಖಂಡ ಹಾಗೂ ಸಂಸದ ಅಸಾದುದ್ದಿನ್ ಓವೈಸಿ ವಿರುದ್ಧ ಹಿಂದೂ ಸೇನೆ ದೂರು ದಾಖಲಿಸಿದೆ.

ಅಸಾದುದ್ದಿನ್ ಓವೈಸ್ ಹಾಗೂ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್(ಎಐಎಂಪಿಎಲ್‍ಬಿ) ವಿರುದ್ಧ ಹಿಂದೂ ಸೇನೆಯ ರಾಷ್ಟ್ರೀಯ ಅಧ್ಯಕ್ಷ ವಿಷ್ಣು ಗುಪ್ತ ನವದೆಹಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ರಾಮ್ ಲಲ್ಲಾ ಕುರಿತು ಎಐಎಂಐಎಂ ಮುಖ್ಯಸ್ಥ ಹಾಗೂ ಎಐಎಂಪಿಎಲ್‍ಬಿ ದ್ವೇಷ ಹಾಗೂ ಹಿಂಸೆಯನ್ನು ಪ್ರಚೋದಿಸುತ್ತಿದ್ದಾರೆ. ದೇವರ ಆಸ್ತಿ ಪೂರ್ತಿ ಹಿಂದೂಗಳಿಗೆ ಸೇರಿದ್ದು, ಆದರೆ ಓವೈಸಿ ಹಾಗೂ ಕೆಲ ಮುಸ್ಲಿಂ ನಾಯಕರು ಸುಪ್ರೀಂ ಕೋರ್ಟ್‍ನ 2019ರ ತೀರ್ಪನ್ನು ತಿರಸ್ಕರಿಸುತ್ತಿದ್ದು, ಅಯೋಧ್ಯೆಯ ರಾಮ ಲಲ್ಲಾ ಜಾಗ ಹಿಂದೂ ಧರ್ಮದ್ದು ಎಂಬುದನ್ನು ಒಪ್ಪುತ್ತಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಅಯೋಧ್ಯೆಯ ರಾಮ ಲಲ್ಲಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಭೂಮಿ ಪೂಜೆ ಮಾಡುವ ದಿನ ಅಸಾದುದ್ದೀನ್ ಓವೈಸಿ ಮಾಡಿದ ಟ್ವೀಟ್ ಉಲ್ಲೇಖಿಸಿ ವಿಷ್ಣು ಗುಪ್ತಾ ದೂರು ಸಲ್ಲಿಸಿದ್ದಾರೆ. ಆಗಸ್ಟ್ 5ರಂದು ಓವೈಸಿ ಟ್ವೀಟ್ ಮಾಡಿದ್ದು, ಬಾಬ್ರಿ ಮಸೀದಿ ಇದೆ, ಮುಂದೆಯೂ ಇರುತ್ತದೆ ಇನ್‍ಷಾಅಲ್ಲಾ ಎಂದು ಬರೆದು ಹ್ಯಾಷ್ ಟ್ಯಾಗ್‍ನೊಂದಿಗೆ ಬಾಬ್ರಿ ಮಸೀದಿ ಝಿಂದಾ ಹೈ ಎಂದು ಬರೆದಿದ್ದರು.

ಇದರ ಜೊತೆಗೆ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಮಾಡಿರುವ ಟ್ವೀಟ್‍ನ್ನು ಸಹ ಗುಪ್ತಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಹಿಂದೂ ಸಮುದಾಯದ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಮತ್ತು ದುರುದ್ದೇಶದಿಂದ ಮಾಡಿದ ಕಾರ್ಯ ಇದಾಗಿದೆ ಎಂದು ದೆಹಲಿ ಪೊಲೀಸ್ ಆಯುಕ್ತ ಎಸ್.ಎನ್.ಶ್ರೀನಿವಾಸ್ ಅವರಿಗೆ ಸಲ್ಲಿಸಿದ ದೂರಿನಲ್ಲಿ ಗುಪ್ತಾ ಉಲ್ಲೇಖಿಸಿದ್ದಾರೆ.

ಇಂತಹ ದುರುದ್ದೇಶಪೂರಿತ ಹೇಳಿಕೆ ನೀಡಿರುವ ಅಸಾದುದ್ದೀನ್ ಓವೈಸಿ ಹಾಗೂ ಎಐಎಂಪಿಎಲ್‍ಬಿ ವಿರುದ್ಧ ಎಫ್‍ಐಆರ್ ದಾಖಲಿಸಿ ಎಂದು ಹಿಂದೂ ಸೇನೆಯ ರಾಷ್ಟ್ರೀಯ ಅಧ್ಯಕ್ಷ ವಿಷ್ಣು ಗುಪ್ತ ಮನವಿ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *