‘ಎಲ್ಲರೊಂದಿಗೂ ರಾಮನಿದ್ದಾನೆ, ಜೈ ಶ್ರೀರಾಮ್‌ʼ – ಪ್ರಿಯಾಂಕಾ ಗಾಂಧಿ

ನವದೆಹಲಿ: ಪ್ರಯಾಂಕಾ ಗಾಂಧಿ ವಾದ್ರಾ ಅಯೋಧ್ಯೆಯಲ್ಲಿ ರಾಮ ಮಂದಿರ ಶಿಲಾನ್ಯಾಸದ ಕುರಿತು ಟ್ವೀಟ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಭಗವಾನ್ ರಾಮನಿಗೆ ನಮಸ್ಕರಿಸುವ ಮೂಲಕ ಅಯೋಧ್ಯೆ ವಿಷಯವಾಗಿ ಕಾಂಗ್ರೆಸ್ ನಿಲುವನ್ನೇ ಬದಲಿಸಿದ್ದಾರೆ.

ರಾಮ ಮಂದಿರದ ಶಿಲಾನ್ಯಾಸದ ಹಿನ್ನೆಲೆ ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟ್ ಮಾಡಿದ್ದು, ಶ್ರೀರಾಮ ಸರಳತೆ, ಸಾಹಸ, ಸಂಯಮ, ತ್ಯಾಗ, ವಚನಬದ್ಧತೆ, ದೀನಬಂಧುವಾಗಿದ್ದಾನೆ. ರಾಮ ಎಲ್ಲೆಲ್ಲೂ ಇದ್ದಾನೆ, ಎಲ್ಲರೊಂದಿಗೂ ಇದ್ದಾನೆ ಎಂದು ಹೇಳಿದ್ದಾರೆ.

ಭಗವಾನ್ ರಾಮ ಹಾಗೂ ಸೀತಾ ಮಾತೆಯ ಸಂದೇಶ ಹಾಗೂ ಕೃಪೆಯೊಂದಿಗೆ ರಾಮಲಲ್ಲಾದಲ್ಲಿ ನಡೆಯುತ್ತಿರುವ ಭೂಮಿ ಪೂಜೆ ರಾಷ್ಟ್ರೀಯ ಏಕತೆ, ಬಂಧುತ್ವ ಹಾಗೂ ಸಂಸ್ಕೃತಿಕ ಸಮಾಗಮದ ಅವಕಾಶವಾಗಲಿ. ಹಿಂದಿಯಲ್ಲಿ ಬರೆದಿರುವ ಕಾಂಗ್ರೆಸ್ ಪಕ್ಷದ ಚಿನ್ಹೆ ಇರುವ ಪತ್ರವನ್ನು ಟ್ವೀಟ್ ಮಾಡಿದ್ದಾರೆ. ಪತ್ರದಲ್ಲಿ ಕೊನೆಗೆ ಜೈ ಶ್ರೀರಾಮ್‌ ಎಂದು ಬರೆದಿದ್ದಾರೆ.

ನಾಳೆ ಪ್ರಧಾನಿ ನರೇಂದ್ರ ಮೋದಿ ಸೇರಿ ನೂರಾರು ಗಣ್ಯರು ಭಾಗವಹಿಸುತ್ತಿರುವ ರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕರನ್ನು ಆಹ್ವಾನಿಸಿಲ್ಲ. ರಾಮ ಮಂದಿರ ನಿರ್ಮಾಣದ ಕುರಿತು ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು, ವಿವಾದಿತ ಜಾಗದಲ್ಲಿ ರಾಮ ಮಂದಿರ ನಿರ್ಮಿಸಬೇಕು, ಮಸೀದಿಗೆ ಬೇರೆಡೆ ಸ್ಥಳ ನೀಡಬೇಕು ಎಂದು ತಿಳಿಸಿದೆ. ಈ ತೀರ್ಪನ್ನು ಕಾಂಗ್ರೆಸ್ ಸಹ ಸ್ವಾಗತಿಸಿತ್ತು.

ರಾಮ ಸೇತು ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದ್ದಾಗ 2007ರಲ್ಲಿ ರಾಮನ ಅಸ್ತಿತ್ವಕ್ಕೆ ಸಂಬಂಧಿಸಿದಂತೆ ಯಾವುದೇ ಐತಿಹಾಸಿಕ ದಾಖಲೆಗಳಿಲ್ಲ ಎಂದು ಯುಪಿಎ ಸರ್ಕಾರ ಅಫಿಡವಿತ್‌ ಸಲ್ಲಿಸಿತ್ತು. ವಾಲ್ಮೀಕಿ ರಾಮಾಯಣ ಮತ್ತು ರಾಮಚರಿತ ಮಾನಸ ಭಾರತದ ಪುರಾತನ ಸಾಹಿತ್ಯವಾಗಿದೆ. ಆದರೆ ಇವುಗಳನ್ನು ಇತಿಹಾಸದ ಆಕಾರ ಗ್ರಂಥ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಅಫಿಡವಿತ್‌ನಲ್ಲಿ ಉಲ್ಲೇಖಿಸಿತ್ತು.

Comments

Leave a Reply

Your email address will not be published. Required fields are marked *