ಕೊರೊನಾ ರೋಗಿಗಳನ್ನು ಕಸದ ಗಾಡಿಯಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯ್ತಾ?

– ವಿಡಿಯೋ ಅಪ್ಲೋಡ್ ಮಾಡಿ ಭಯಾನಕ ಘಟನೆ ಎಂದ ನಾಯ್ಡು

ಅಮಾರವತಿ: ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯಲ್ಲಿ ಅಧಿಕಾರಿಗಳು ಮೂವರು ಕೊರೊನಾ ವೈರಸ್ ಸೋಂಕಿತರನ್ನು ಕಸದ ಗಾಡಿಯಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಡಿಯೋವೊಂದನ್ನು ತಮ್ಮ ಟ್ವಟ್ಟರ್ ಅಕೌಂಟ್ ನಲ್ಲಿ ಅಪ್ಲೋಡ್ ಮಾಡಿಕೊಂಡ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಭಯಾನಕ ಘಟನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ ವಿಜಯನಗರಂ ಜಿಲ್ಲೆಯ ಜಾರ್ಜಪುಪೇಟ ಬಿಸಿ ಕಾಲೊನಿಯ ಮೂವರು ಕೋವಿಡ್ 19 ರೋಗಿಗಳನ್ನು ಕಸದ ಗಾಡಿಯಲ್ಲಿ ಆಸ್ಪತ್ರೆಗೆ ಕರೆದೊಯ್ದ ದೃಶ್ಯ ಎಂದು ಬರೆದುಕೊಂಡಿದ್ದಾರೆ.

ಕೊರೊನಾ ವೈರಸ್ ಬಗ್ಗೆ ತಿಳಿದಿಲ್ಲ, ಆದರೆ ಅಸಹಾಯಕ ರೋಗಿಗಳು ಇತರ ಅಪಾಯಕಾರಿ ಕಾಯಲೆಗಳಿಗೆ ತುತ್ತಾಗುವ ಸಾಧ್ಯತೆಗಳಿವೆ. ಯಾಕೆ ಅವರನ್ನು ಮನಷ್ಯರಂತೆ ಉಪಚರಿಸಲ್ಲ ಎಂದು ಮಾಜಿ ಸಿಎಂ ಪ್ರಶ್ನಿಸಿದ್ದಾರೆ. ಚಂದ್ರಬಾಬು ನಾಯ್ಡು ಅವರು ಟ್ವಿಟ್ಟರ್‍ನಲ್ಲಿ ವಿಡಿಯೋ ಅಪ್ಲೋಡ್ ಮಾಡಿ ಟೀಕೆ ವ್ಯಕ್ತಪಡಿಸಿದ ಬಳಿಕ ಕೊರೊನಾ ಪಾಸಿಟಿವ್ ಬಂದಿರುವ ರೋಗಿಗಳನ್ನೇ ಈ ರೀತಿಯಾಗಿ ಕರೆಯೊಯ್ಯಲಾಗಿದೆ ಎಂದು ಬೆಳಕಿಗೆ ಬಂದಿದೆ.

ಹೀಗೆ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಜಿಲ್ಲಾ ವೈದ್ಯಕೀಯ ಹಾಗೂ ಆರೋಗ್ಯಾಧಿಕಾರಿ ಡಾ. ರಮಣ ಕುಮಾರಿ, ಈ ಬಗ್ಗೆ ತನಿಖೆಗೆ ಆದೇಶಿಸಿರುವುದಾಗಿ ತಿಳಿಸಿದ್ದಾರೆ. ಪ್ರಾಥಮಿಕ ಮಾಹಿತಿಗಳ ಪ್ರಕಾರ ಇದು ಕೇವಲ 2 ದಿನಗಳ ಹಿಂದೆಯಷ್ಟೇ ನಡೆದಿರುವ ಘಟನೆಯಾಗಿದೆ ಎಂದು ಕುಮಾರಿ ಹೇಳಿದ್ದಾರೆ.

ಇತ್ತ ನಗರ ಪಂಚಾಯತ್ ಕಮಿಷನರ್ ಜೆಎಆರ್ ಅಪ್ಪಲ ನಾಯ್ಡು ಹೇಳಿಕೆ ನೀಡಿದ್ದು, ಜಿಲ್ಲಾಧಿಕಾರಿಗಳ ಅದೇಶದ ಮೇರೆಗೆ ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ. ನನಗೆ ಬಂದ ಮಾಹಿತಿ ಪ್ರಕಾರ, ಆ ವಾಹನವನ್ನು ಕೊರೊನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರ ಮಾಡಲು ಬೇಕಾದ ಅಗತ್ಯ ವಸ್ತುಗಳಾದ ಸೋಡಿಯಂ ಹೈಪೋಕ್ಲೋರೈಟ್, ಬ್ಲೀಚಿಂಗ್ ಪೌಡರ್ ಮತ್ತು 20 ಕೆ.ಜಿಯಷ್ಟು ಉಪ್ಪು ಸಾಗಿಸಲು ಬಳಕೆ ಮಾಡಲಾಗುತ್ತಿದೆ ಎಂದಿದ್ದಾರೆ.

ವಾಹನದಲ್ಲಿ ಕಾಣುವ ವ್ಯಕ್ತಿಗಳು ಕೊರೊನಾ ರೋಗಿಗಳಲ್ಲ. ಆ ವಾಹನವನ್ನು ರೋಗಿಗಳನ್ನು ಸ್ಥಳಾಂತರಿಸಲು ಕೂಡ ಎಂದಿಗೂ ಬಳಸಿಲ್ಲ. ಪುರಸಭೆ ಸಿಬ್ಬಂದಿ ಕಸದ ಟ್ರಕ್ ನಲ್ಲಿ ಯಾವುದೇ ಕೋವಿಡ್ ರೋಗಿಯನ್ನು ಸಾಗಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *