ಕೊರೊನಾ ಭೀತಿ ನಡುವೆಯೇ ವರಮಹಾಲಕ್ಷ್ಮಿ ಹಬ್ಬಕ್ಕೆ ಜೋರು ವ್ಯಾಪಾರ

-ಇತ್ತ ಕುರಿ ವ್ಯಾಪಾರ ಬಲು ಜೋರು

ರಾಯಚೂರು: ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ ರಾಯಚೂರಿನಲ್ಲಿ ಹಣ್ಣು, ಹೂ ವ್ಯಾಪಾರ ಜೋರಾಗಿದೆ. ಕೊರೊನಾ ಭೀತಿ ನಡುವೆಯೂ ಜನ ಸಾಮಾಜಿಕ ಅಂತರ ಮರೆತು ವ್ಯಾಪಾರ ಜೋರಾಗಿ ನಡೆಸಿದ್ದಾರೆ. ಮಾಸ್ಕ್ ಸಹ ಧರಿಸದೆ ಜನ ಬಾಳೆದಿಂಡು, ಹಸಿರು ಬಳೆ, ಹಣ್ಣು ಖರೀದಿ ಮಾಡುತ್ತಿದ್ದಾರೆ.

ಮಾರ್ಕೆಟ್ ತುಂಬಾ ಮಹಿಳೆಯರೇ ವ್ಯಾಪಾರ ನಡೆಸಿದ್ದು ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾಗಿದೆ. ಆದ್ರೆ ವ್ಯಾಪಾರಿಗಳು ಮಾತ್ರ ಈ ವರ್ಷ ವ್ಯಾಪಾರವೇ ಇಲ್ಲಾ ಅಂತ ಬೇಸರ ವ್ಯಕ್ತಪಡಿಸಿದ್ದಾರೆ. ಬೆಲೆಯಲ್ಲೂ ವ್ಯತ್ಯಾಸವಾಗಿದ್ದು ಮಳೆ ಹಿನ್ನೆಲೆ ಹಣ್ಣುಗಳು ಮಾರುಕಟ್ಟೆಗೆ ಬರುತ್ತಿಲ್ಲ ಅಂತ ಅಸಮಧಾನ ತೋಡಿಕೊಂಡಿದ್ದಾರೆ.

ವರಮಹಾಲಕ್ಷ್ಮಿ ಹಬ್ಬದ ವ್ಯಾಪಾರ ಒಂದು ಕಡೆಯಾದ್ರೆ ಇನ್ನೊಂದೆಡೆ ಬಕ್ರಿದ್ ಹಿನ್ನೆಲೆ ಕುರಿಗಳ ವ್ಯಾಪಾರವೂ ಜೋರಾಗಿದೆ. ರಾಯಚೂರು ನಗರಕ್ಕೆ ಜಿಲ್ಲೆಯ ವಿವಿಧೆಡೆಯಿಂದ ಕುರಿಗಳನ್ನ ತಂದು ಮಾರಾಟ ಮಾಡುತ್ತಿದ್ದಾರೆ. ಕೊರೊನಾ ಆತಂಕದ ನಡುವೆ ಬಕ್ರಿದ್ ಹಬ್ಬದ ಖರೀದಿ ಜೋರಾಗಿ ನಡೆದಿದೆ.

ಆಗಸ್ಟ್ 1 ರಂದು ಬಕ್ರಿದ್ ಹಬ್ಬಕ್ಕೆ ಕುರ್ಬಾನಿ ನೀಡಲು ಮುಸ್ಲಿಂ ಬಾಂಧವರು ಕುರಿಗಳ ಖರೀದಿ ಮಾಡುತ್ತಿದ್ದಾರೆ. 12 ಸಾವಿರದಿಂದ 60 ಸಾವಿರ ರೂ. ವರೆಗೆ ಒಂದು ಕುರಿ ಮಾರಾಟ ನಡೆದಿದೆ. ಕೊರೊನಾ ವ್ಯಾಪಾಕವಾಗುತ್ತಿದ್ದರೂ, ಎಚ್ಚೆತ್ತುಕೊಳ್ಳದ ಜನತೆ ಹಬ್ಬದ ಸಂಭ್ರಮದ ಗುಂಗಿನಲ್ಲಿದ್ದಾರೆ.

 

Comments

Leave a Reply

Your email address will not be published. Required fields are marked *