ಇತಿಹಾಸದಲ್ಲೇ ಮೊದಲ ಬಾರಿಗೆ ಕುಕ್ಕೆಯಲ್ಲಿ ಭಕ್ತರಿಲ್ಲದೆ ನಡೆದ ನಾಗರಪಂಚಮಿ

ಮಂಗಳೂರು: ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ದಕ್ಷಿಣ ಭಾರತದ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರಿಲ್ಲದೆ ನಾಗರಪಂಚಮಿ ಹಬ್ಬವನ್ನು ಆಚರಿಸಲಾಯಿತು.

ಕೊರೊನಾ ಮಹಾಮಾರಿಯ ಅಟ್ಟಹಾಸದಿಂದಾಗಿ ಈ ಬಾರಿಯ ಕುಕ್ಕೆ ಕ್ಷೇತ್ರದಲ್ಲಿ ನಾಗರಪಂಚಮಿಯ ವಿಶೇಷ ದಿನವಾದ ಇಂದು ನಿರ್ಬಂಧ ಹೇರಲಾಗಿತ್ತು. ಭಕ್ತರು ಬಂದರೆ ಸಾಮಾಜಿಕ ಅಂತರ ಸೇರಿದಂತೆ ಎಲ್ಲಾ ರೀತಿಯಿಂದಲೂ ತೊಂದರೆಯಾಗುತ್ತದೆ. ಹೀಗಾಗಿ ಇಂದು ಭಕ್ತರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು.

ನಾಗರಪಂಚಮಿಯ ದಿನ ನಾಗದೇವರಿಗೆ ವಿಶೇಷ ದಿನವಾಗಿರುವುದರಿಂದ ಕುಕ್ಕೆ ಕ್ಷೇತ್ರದಲ್ಲಿ ಅರ್ಚಕರು ನಾಗದೇವರ ಕಲ್ಲಿಗೆ ಸೀಯಾಳಾಭಿಷೇಕ, ಹಾಲಿನ ಅಭಿಷೇಕ ನಡೆಸಿದರು. ಜೊತೆಗೆ ನಾಗರಪಂಚಮಿಯ ವಿಧಿ ವಿಧಾನದಂತೆ ಪೂಜೆ ಸಲ್ಲಿಸಿದರು. ಈ ಸಂದರ್ಭ ಕ್ಷೇತ್ರದ ಸಿಬ್ಬಂದಿ ಹಾಗೂ ಅರ್ಚಕರು ಮಾತ್ರ ಉಪಸ್ಥಿತರಿದ್ದರು.

ಪ್ರತಿ ವರ್ಷ ನಾಗರಪಂಚಮಿಯ ದಿನದಂದು ಲಕ್ಷಾಂತರ ಮಂದಿ ಕುಕ್ಕೆಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದರು. ಈ ಬಾರಿ ಮಾತ್ರ ಬೆರಳೆಣಿಕೆಯ ಭಕ್ತರು ದೇವಸ್ಥಾನದ ಹೊರಗಿನಿಂದಲೇ ನಮಸ್ಕರಿಸಿ ತೆರಳಿದರು.

Comments

Leave a Reply

Your email address will not be published. Required fields are marked *