ಕೋವಿಡ್ ವರದಿ ಇಲ್ಲದೆ ದಾಖಲಿಸಿಕೊಳ್ಳಲು ಖಾಸಗಿ ಆಸ್ಪತ್ರೆಗಳು ನಕಾರ- ಸರ್ಕಾರಿ ವೈದ್ಯ ಸಾವು

ಬೆಂಗಳೂರು: ಕೋವಿಡ್ 19 ವರದಿ ಇಲ್ಲದೆ ಮೂರು ಖಾಸಗಿ ಆಸ್ಪತ್ರೆಗಳು ದಾಖಲಿಸಿಕೊಳ್ಳಲು ನಿರಾಕರಿಸಿದ ಪರಿಣಾಮ ಸರ್ಕಾರಿ ವೈದರೊಬ್ಬರು ಮೃತಪಟ್ಟ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ಹೌದು. ಮೃತ ದುರ್ದೈವಿಯನ್ನು ಡಾ. ಮಂಜುನಾಥ್ ಎಂದು ಗುರುತಿಸಲಾಗಿದೆ. ಇವರು ಕೋವಿಡ್ 19 ವಾರಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಅನಾರೋಗ್ಯ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಇವರನ್ನು ದಾಖಲಿಸಿಕೊಳ್ಳಲು ಆಸ್ಪತ್ರೆಗಳು ನಿರಾಕರಿಸಿದವು. ಮಂಜುನಾಥ್ ಅವರು ರಾಮನಗರ ಜಿಲ್ಲೆಯಲ್ಲಿರುವ ರಾಜ್ಯ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ್ದರು.

ಈ ಸಂಬಂಧ ಬಿಬಿಎಂಪಿ ವಿಶೇಷ ಆಯುಕ್ತ ಡಿ. ರಂದೀಪ್ ಮಾತನಾಡಿ, ಡಾ. ಮಂಜುನಾಥ್ ಅವರನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ ಆಸ್ಪತ್ರೆಗಳ ವಿರುದ್ಧ ಆರೋಗ್ಯ ಇಲಾಖೆ ಕ್ರಮಕೈಗೊಳ್ಳುತ್ತದೆ ಎಂದು ತಿಳಿಸಿದ್ದಾರೆ.

ಜೂನ್ ಕೊನೆಯಲ್ಲಿ ಡಾ. ಮಂಜುನಾಥ್ ಅವರು ಜೆಪಿ ನಗರದಲ್ಲಿರುವ ರಾಜಶೇಖರ ಆಸ್ಪತ್ರೆ, ಕೆಂಗೇರಿಯಲ್ಲಿರುವ ಬಿಜಿಎಸ್ ಗ್ಲೋಬಲ್ ಆಸ್ಪತ್ರೆ ಹಾಗೂ ಕುಮಾರಸ್ವಾಮಿ ಲೇ ಔಟ್ ನಲ್ಲಿರುವ ಸಾಗರ ಆಸ್ಪತ್ರೆಗೆ ಅಲೆದಾಡಿದ್ದಾರೆ. ಈ ಮೂರು ಆಸ್ಪತ್ರೆಗಳು ಕೂಡ ಕೋವಿಡ್ 19 ಟೆಸ್ಟ್ ವರದಿ ತಂದ ಬಳಿಕವೇ ದಾಖಲಿಸಿಕೊಳ್ಳುವುದಾಗಿ ತಿಳಿಸಿದವು ಎಂದು ಮಂಜುನಾಥ್ ಕುಟುಂಬಸ್ಥರು ದೂರಿದ್ದಾರೆ.

ವಿಪರ್ಯಾಸ ಅಂದರೆ, ಮಂಜುನಾಥ್ ಸಂಬಂಧಿ ನಾಗೇಶ್ ಬಿಬಿಎಂಪಿ ವೈದ್ಯರಾಗಿದ್ದು, ಹಾಸಿಗೆ ಹಂಚುವ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಆದರೆ ಮಂಜುನಾಥ್ ಗೆ ಸಹಾಯ ಮಾಡಲು ಅವರು ಕೂಡ ಅಸಹಾಯಕರಾಗಿದ್ದರು.

ಕೊನೆಗೆ ವೈದ್ಯ ಕುಟುಂಬಸ್ಥರು ದಯಾನಂದ ಸಾಗರ್ ಕ್ಯಾಂಪಸ್ ಫುಟ್‍ಪಾತ್ ನಲ್ಲಿ ಈ ಸಂಬಂಧ ಧರಣಿ ನಡೆಸಿದ ಬಳಿಕ ಜುಲೈ 25ರಂದು ಮಂಜುನಾಥ್ ಅವರನ್ನು ಸಾಗರ ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಯಿತು. ಅಲ್ಲಿ ಅವರನ್ನು ವೆಂಟಿಲೇಟರ್ ನಲ್ಲಿ ಇಡಲಾಯಿತಾದರೂ ನಂತರ ಅವರನ್ನು ಅಲ್ಲಿಂದ ಮೆಡಿಕಲ್ ಕಾಲೇಜ್ ಆ್ಯಂಡ್ ರಿಸರ್ಚ್ ಇನ್ಸ್ ಸ್ಟಿಟ್ಯೂಟ್ ಗೆ ಶಿಫ್ಟ್ ಮಾಡಲಾಯಿತು. ಆದರೆ ಇಂದು ಮುಂಜಾನೆ ಮಂಜುನಾಥ್ ಇಹಲೋಕ ತ್ಯಜಿಸಿದರು. ಇತ್ತ ಮಂಜುನಾಥ್ ಅವರನ್ನು ಜುಲೈ 9 ರಂದು ಡಿಸ್ಚಾರ್ಜ್ ಮಾಡಲಾಗಿದೆ. ಯಾಕಂದರೆ ಅವರಿಗೆ ಪ್ಲಾಸ್ಮಾ ಥೆರಪಿಯ ಅವಶ್ಯಕತೆ ಇತ್ತು ಎಂದು ಆಸ್ಪತ್ರೆ ತಿಳಿಸಿದೆ.

ಸಿಲಿಕಾನ್ ಸಿಟಿಯಲ್ಲಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿ ಪ್ರಾಣಬಿಟ್ಟ ಹಲವು ಪ್ರಕರಣಗಳು ಇವೆ. ಯಾವ ರೀತಿಯ ಚಿಕಿತ್ಸೆ ನೀಡಬೇಕು ಎಂದು ತಿಳಿಯಲು ಕೋವಿಡ್ 19 ಟೆಸ್ಟ್ ಬೇಕೇ ಬೇಕು ಎಂದು ಆಸ್ಪತ್ರೆಗಳು ಹೇಳುತ್ತಿವೆ. ಸದ್ಯ ಬೆಂಗಳೂರಿನಲ್ಲಿ 37 ಸಾವಿರ ಕೊರೊನಾ ಪ್ರಕರಣಗಳು ಪತ್ತೆಯಾಗಿದೆ. ಇಡೀ ಭಾರತ ದೇಶದಲ್ಲಿ ಸರಿಸುಮಾರು 100 ವೈದ್ಯರು ಕೊರೊನಾಗೆ ಬಲಿಯಾಗಿದ್ದಾರೆ.

Comments

Leave a Reply

Your email address will not be published. Required fields are marked *