ಧಮ್ಕಿ ಹಾಕಲು ಮನೆಗೆ ಬಂದವರಿಗೆ ಶೂಟೌಟ್- ಓರ್ವ ಸಾವು, ಇಬ್ಬರು ಗಂಭೀರ

ಧಾರವಾಡ: ಆಸ್ತಿ ವಿಚಾರಕ್ಕೆ ಸಂಬಂಧಿಕರ ನಡುವಿನ ಜಗಳ ತಾರಕಕ್ಕೇರಿ ಶೂಟೌಟ್ ನಡೆದಿದ್ದು, ಪರಿಣಾಮ ಓರ್ವ ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಶಿವಯೋಗಿ ಬಾವಿಕಟ್ಟಿ (44) ಮೃತ ವ್ಯಕ್ತಿ. ನಗರದ ಮದಿಹಾಳದ ಗಣೇಶನಗರದಲ್ಲಿ ಶನಿವಾರ ಕಳೆದ ತಡರಾತ್ರಿ ಘಟನೆ ನಡೆದಿದೆ. ಜಿಲ್ಲೆಯ ಶಿರೂರ ಗ್ರಾಮದ ಶ್ರೀ ಶೈಲ್ ಎಂಬಾತ ತನ್ನ ರಿವಾಲ್ವರ್‌ನಿಂದ ಶಿವಯೋಗಿಯನ್ನು ಶೂಟ್ ಮಾಡಿ ಕೊಲೆ ಮಾಡಿದ್ದಾನೆ.

ಶಿರೂರ ಗ್ರಾಮದಲ್ಲಿ ಶ್ರೀಶೈಲ್ ಹಾಗೂ ಆತನ ಸಹೋದರಿ ಸುವರ್ಣಾಗೆ ಸಂಬಂಧಿಸಿದ ಆಸ್ತಿ ಇದೆ. ಈ ಆಸ್ತಿ ವಿವಾದ ಬಹಳ ವರ್ಷಗಳಿಂದ ನಡೆಯುತ್ತಲೇ ಇತ್ತು. ಆದರೆ ಕಳೆದ ರಾತ್ರಿ ಸುವರ್ಣಾನ ಮಗ ಈರಪ್ಪ ಹೆಬ್ಬಳ್ಳಿ ತನ್ನ ಗೆಳೆಯನಾದ ಶಿವಯೋಗಿಯನ್ನು ಶ್ರೀಶೈಲ್ ಮನೆಗೆ ಕರೆದುಕೊಂಡು ಹೋಗಿ ಆಸ್ತಿ ಕೊಡಲು ಧಮ್ಕಿ ಹಾಕಿದ್ದಾನೆ. ಈ ವೇಳೆ ಈರಪ್ಪ ಹಾಗೂ ಶಿವಯೋಗಿ ಆರೋಪಿ ಶ್ರೀಶೈಲನಿಗೆ ಮಾರಕಾಸ್ತ್ರಗಳಿಂದ ಹೊಡೆಯಲು ಪ್ರಯತ್ನಿಸಿದ್ದಾರೆ. ಆಗ ಶ್ರೀಶೈಲ್ ತನ್ನ ಬಳಿ ಇದ್ದ ರಿವಾಲ್ವರ್‌ನಿಂದ ಶೂಟ್ ಮಾಡಿದ್ದಾನೆ.

ಶೂಟ್ ಮಾಡಿದ ತಕ್ಷಣ ಶಿವಯೋಗಿಗೆ ಎದೆಗೆ ಗುಂಡು ಬಿದ್ದಿದೆ. ಈರಪ್ಪನಿಗೆ ಕೂಡ ಗುಂಡು ತಗುಲಿದೆ. ಇದೇ ವೇಳೆ ಈರಪ್ಪನ ಸಂಬಂಧಿ ಸುನೀಲ್ ಸ್ಥಳಕ್ಕೆ ಬಂದಿದ್ದಾನೆ. ಆತನ ಮೇಲೂ ಶ್ರೀಶೈಲ್ ಗುಂಡು ಹಾರಿಸಿದ್ದಾನೆ. ಮೂವರನ್ನ ಆಸ್ಪತ್ರೆಗೆ ಸಾಗಿಸುವ ವೇಳೆ ಶಿವಯೋಗಿ ಮಾರ್ಗ ಮಧ್ಯದಲ್ಲೇ ಸಾವನ್ನಪ್ಪಿದ್ದಾನೆ.

ಸದ್ಯ ಶೂಟೌಟಿನಲ್ಲಿ ಗಾಯಗೊಂಡ ಈರಪ್ಪ ಹಾಗೂ ಸುನೀಲ್‍ನನ್ನು ಚಿಕಿತ್ಸೆಗೆಂದು ಹುಬ್ಬಳ್ಳಿ ಕಿಮ್ಸ್ ಗೆ ದಾಖಲು ಮಾಡಲಾಗಿದೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಕೊಲೆ ಮಾಡಿ ಪರಾರಿಯಾದ ಶ್ರೀಶೈಲನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *