ಅನ್ನಭಾಗ್ಯ ನಿಮ್ಮ ಸಾಧನೆಯಲ್ಲ, ಅದ್ರ ಕಲ್ಪನೆ ಕೊಟ್ಟಿದ್ದು ನಾನು: ಸಿದ್ದು ವಿರುದ್ಧ ವಿಶ್ವನಾಥ್ ವಾಗ್ದಾಳಿ

ಮೈಸೂರು: ಅನ್ನಭಾಗ್ಯದ ಕಲ್ಪನೆಯನ್ನು ನಿಮಗೆ ಕೊಟ್ಟಿದ್ದು ನಾನೇ. ಅದು ಕೂಡ ನಿಮ್ಮ ಸಾಧನೆಯಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪ್ರಧಾನಿ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯ ಟೀಕೆ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅವರು, ಪ್ರಧಾನಿ ಮೇಲೆ ವಿಪಕ್ಷಗಳು ಮಾಡಿರುವ ಪದ ಪ್ರಯೋಗ ದೇಶದ ಜನರು ಮೆಚ್ಚಲ್ಲ. ಲೋಕಸಭಾ ಚುನಾವಣೆಯಲ್ಲಿ ವಿಪಕ್ಷಗಳ ಸಾಧನೆ ಏನು, ಮೋದಿ ಸಾಧನೆ ಏನು ಎಂದು ಪ್ರಶ್ನಿಸಿದರು.

ದೊಡ್ಡ ದೊಡ್ಡವರೆಲ್ಲಾ ಅಪ್ರಬುದ್ಧರಾಗಿ ಮಾತಾಡುತ್ತಿದ್ದಾರೆ. ದೇವರಾಜ ಅರಸ್ ಅವರನ್ನು ಮೋದಿಯಲ್ಲಿ ಕಾಣುತ್ತಿದ್ದೇನೆ. ಅಹಿಂದ ಪ್ರಧಾನಿಯನ್ನು ಈ ರೀತಿ ಟೀಕೆ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದರು.

ರಾಹುಲ್ ಗಾಂಧಿ ಈ ಪ್ರಧಾನಿಗೂ ಗೌರವ ಕೊಡಲ್ಲ. ಕಾಂಗ್ರೆಸ್ಸಿನಲ್ಲಿಯೇ ಪ್ರಧಾನಿಯಾದವರಿಗೂ ಗೌರವ ಕೊಟ್ಟಿಲ್ಲ. ನೀವು ಗೌರವ ಕೊಡುವುದನ್ನೇ ಕಲಿತಿಲ್ಲ ಎಂದರು.

ಸಿದ್ದರಾಮಯ್ಯ ಪ್ರಧಾನಿಯನ್ನು ಅನ್‍ಫಿಟ್ ಅಂತಾರೆ. ಹಾಗಾದರೆ ನೀವು ಸಿಎಂ ಆಗುವುದಕ್ಕೆ ಫಿಟ್ ಆಗಿದ್ರಾ..?, ಮೋದಿ ಅವರದ್ದು ಗುಜರಾತ್ ಮಾಡೆಲ್ ಇದೆ, ನಿಮ್ಮ ಮಾಡೆಲ್ ಏನಿದೆ ಎಂದು ಪ್ರಶ್ನಿಸಿದರು. ಇದೇ ವೇಳೆ ಅನ್ನಭಾಗ್ಯದ ಕಲ್ಪನೆಯನ್ನು ನಿಮಗೆ ಕೊಟ್ಟಿದ್ದು ನಾನೇ ಅದು ಕೂಡ ನಿಮ್ಮ ಸಾಧನೆಯಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರಧಾನಿ ವಿರುದ್ಧ ದಾಖಲೆ ಇದ್ದರೆ ಬಿಡುಗಡೆ ಮಾಡಿ. ಹಿಟ್ ಅಂಡ್ ರನ್ ಮಾಡಬೇಡಿ. ಕೇಂದ್ರ, ರಾಜ್ಯ ಸರಕಾರದ ವಿರುದ್ಧ ಆರೋಪ ಇದ್ದರೆ ದಾಖಲೆ ಕೊಡಿ. ಸುಮ್ಮನೆ ಮಾತಾಡಬೇಡಿ ಎಂದು ವಿಪಕ್ಷಗಳ ವಿರುದ್ಧ ಗರಂ ಆದರು.

Comments

Leave a Reply

Your email address will not be published. Required fields are marked *