ನಿನ್ನೆ ಬಸವನಗುಡಿ, ಇಂದಿನಿಂದ ಮಲ್ಲೇಶ್ವರಂ ಲಾಕ್‍ಡೌನ್

ಬೆಂಗಳೂರು: ಕೊರೊನಾ ಕಾಟಕ್ಕೆ ಬೆಂಗಳೂರು ನಲುಗಿ ಹೋಗಿದೆ. ಸರ್ಕಾರ ಲಾಕ್‍ಡೌನ್ ಮಾಡಲಿಲ್ಲ ಅಂದರೂ ನಾವೇ ಸ್ವಯಂ ಲಾಕ್‍ಡೌನ್ ಮಾಡಿಕೊಳ್ಳುತ್ತೇವೆ ಅಂತ ಬೆಂಗಳೂರಿನ ಕಮರ್ಷಿಯಲ್ ಏರಿಯಾದ ಜನ ಮುಂದಾಗಿದ್ದಾರೆ.

ಲಾಕ್‍ಡೌನ್ ಸಮಯದಲ್ಲಿ ದಿನಕ್ಕೆ ನಾಲ್ಕೈದು ಪ್ರಕರಣಗಳು ಬರುತ್ತಿದ್ದು, ಸಿಲಿಕಾನ್ ಸಿಟಿಯಲ್ಲಿ ಲಾಕ್‍ಡೌನ್ ಸಡಿಲಿಕೆ ಬಳಿಕ ಸೆಂಚುರಿ ಮೇಲೆ ಸೆಂಚುರಿ ಬಾರಿಸಿದ್ದ ಕೊರೊನಾ ಈಗ ದಿನಕ್ಕೆ 800ರ ಬಳಿ ಬಂದಿದೆ. ಹೀಗೆ ಹೋದರೆ ಬೆಂಗಳೂರು ಮತ್ತೊಂದು ಮುಂಬೈ ನಗರ ಆಗುವುದರಲ್ಲಿ ಅನುಮಾನವೇ ಇಲ್ಲ. ಇದಕ್ಕೆ ಕಡಿವಾಣ ಹಾಕಲು ಬೆಂಗಳೂರಿನ ವರ್ತಕರು ಮುಂದಾಗಿದ್ದರು.

ಬಸವನಗುಡಿಯ ವರ್ತಕರ ಸಂಘದವರು ಮಂಗಳವಾರದಿಂದ ಜುಲೈ 6 ರವರೆಗೆ ಒಂದು ವಾರಗಳ ಕಾಲ ಸ್ವಯಂ ಲಾಕ್‍ಡೌನ್ ಮಾಡಿದ್ದಾರೆ. ಈಗ ಮಲ್ಲೇಶ್ವರಂ ವರ್ತಕರು ಲಾಕ್‍ಡೌನ್ ಮಾಡಲು ಮುಂದಾಗಿದ್ದಾರೆ. ಇಂದಿನಿಂದ ಜುಲೈ 7 ರವೆಗೆ ಸ್ವಯಂ ಲಾಕ್‍ಡೌನ್ ಮಾಡಿಕೊಳ್ಳುವುದಕ್ಕೆ ನಿರ್ಧಾರ ಮಾಡಿಕೊಂಡಿದ್ದಾರೆ.

ಈಗಾಗಲೇ ಕೆ.ಆರ್.ಮಾರುಕಟ್ಟೆ, ಚಿಕ್ಕಪೇಟೆ, ಸೇರಿದಂತೆ ಅನೇಕ ಕಡೆ ವರ್ತಕರು ಸ್ವಯಂ ಲಾಕ್‍ಡೌನ್ ಮಾಡಿಕೊಂಡಿದ್ದಾರೆ. ಇದೇ ಮಾರ್ಗದಲ್ಲಿ ಬನಶಂಕರಿ, ಕೆ.ಆರ್ ಪುರಂ, ಯಶವಂತಪುರ, ಕಮರ್ಷಿಯಲ್ ಸ್ಟ್ರೀಟ್ ಜಯನಗರದ ವರ್ತಕರು ಸ್ವಯಂ ಲಾಕ್‍ಡೌನ್ ಮಾಡಿಕೊಳ್ಳುವ ಸಾಧ್ಯತೆ ಇದೆ.

Comments

Leave a Reply

Your email address will not be published. Required fields are marked *