ಕೊರೊನಾ ತಡೆಗಾಗಿ ಕಾರ್ಯಾಚರಣೆಗೆ ಇಳಿದ ಪೊಲೀಸರು- 58 ಸಾವಿರ ದಂಡ

– ದಂಡ ವಿಧಿಸಿ ಉಚಿತವಾಗಿ ಮಾಸ್ಕ್ ಹಂಚಿಕೆ

ರಾಯಚೂರು: ನಗರದಲ್ಲಿ ಕೊರೊನಾ ತಡೆಗಾಗಿ ಕಾರ್ಯಾಚರಣೆಗೆ ಇಳಿದ ರಾಯಚೂರು ಪೊಲೀಸರು ಸಾಮಾಜಿಕ ಅಂತರ ಕಾಪಾಡದ ಅಂಗಡಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ರಾಯಚೂರು ಜಿಲ್ಲೆಯಾದ್ಯಂತ ಪೊಲೀಸರು ಈವರೆಗೆ 23 ಪ್ರಕರಣಗಳು ದಾಖಲಿಸಿದ್ದಾರೆ. ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಪಾಡದೆ, ಸ್ಯಾನಿಟೈಸರ್ ವ್ಯವಸ್ಥೆಯಿಲ್ಲದೆ ವ್ಯಾಪಾರ ಮಾಡುವ ಅಂಗಡಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಚಾಕ್ಲೇಟ್ ಅಂಗಡಿ, ಕಿರಾಣಿ ಸ್ಟೋರ್, ಜನರಲ್ ಸ್ಟೋರ್, ಚಹಾ ಹೋಟೆಲ್ ಹಾಗೂ ಹಾಲಿನ ಅಂಗಡಿ ವಿರುದ್ಧ ಕೇಸ್ ಬುಕ್ ಮಾಡಲಾಗಿದೆ.

ಜನರನ್ನು ಗುಂಪು-ಗುಂಪಾಗಿ ಸೇರಿಸಿಕೊಂಡು ವ್ಯಾಪಾರ ಮಾಡುವ ವ್ಯಾಪಾರಿಗಳ ವಿರುದ್ದ ಕ್ರಮ ಕೈಗೊಂಡಿದ್ದು, ಕೇಸ್ ಬುಕ್ ಮಾಡಿ ದಂಡ ಹಾಕಿ ಪೊಲೀಸರು ಖಡಕ್ ಎಚ್ಚರಿಕೆ ನೀಡುತ್ತಿದ್ದಾರೆ. ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್ ಬಳಸಿ ವ್ಯಾಪಾರ ಮಾಡುವಂತೆ ಸೂಚನೆ ನೀಡಿದ್ದಾರೆ.

ಕೊರೊನಾ ಸೋಂಕು ತಡೆಗಟ್ಟಲು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ತಿಳುವಳಿಕೆ ನೀಡಲು ನಗರದ ಪ್ರಮುಖ ವೃತ್ತಗಳಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಜಿಲ್ಲಾ ಪೊಲೀಸ್ ವತಿಯಿಂದ 321 ಬೈಕ್ ಸವಾರರು ಮತ್ತು ಸಾರ್ವಜನಿಕರಿಗೆ ಒಟ್ಟು 58,800 ರೂಪಾಯಿ ದಂಡ ವಿಧಿಸಲಾಗಿದೆ. ಜೊತೆಗೆ ಮಾಸ್ಕ್ ಇಲ್ಲದೆ ಓಡಾಡುವ ಸಾರ್ವಜನಿಕರಿಗೆ ದಂಡ ವಿಧಿಸಿ ಉಚಿತವಾಗಿ ಮಾಸ್ಕ್ ಗಳನ್ನ ಹಂಚಲಾಗಿದೆ.

Comments

Leave a Reply

Your email address will not be published. Required fields are marked *