ಅಭಿಮಾನಿಗಳಿಗೆ ವಿಶೇಷ ಮನವಿಯೊಂದನ್ನು ಮಾಡಿದ ಗೋಲ್ಡನ್ ಸ್ಟಾರ್ ಗಣಿ

ಬೆಂಗಳೂರು: ಚಂದನವದ ಚಿನ್ನದ ಹುಡುಗ ಗಣೇಶ್ ಅವರು ತನ್ನ ಅಭಿಮಾನಿಗಳಿಗೆ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ.

ಜುಲೈ 2ರಂದು ಗೋಲ್ಡನ್ ಸ್ಟಾರ್ ಗಣೇಶ್ ಅವರು ಹುಟ್ಟುಹಬ್ಬವಿದೆ. ನೆಚ್ಚಿನ ನಾಯಕ ಹುಟ್ಟುಹಬ್ಬವೆಂದರೆ ಅವರ ಅಭಿಮಾನಿಗಳು ಹಾರ-ತುರಾಯಿ ಹೊತ್ತುಕೊಂಡು ದೂರದ ಊರಿನಿಂದ ಬಂದ ವಿಶ್ ಮಾಡುತ್ತಾರೆ. ಆದರೆ ಈ ವರ್ಷ ಕೊರೊನಾ ಇರುವುದರಿಂದ ಯಾರೂ ಕೂಡ ಮನೆ ಬಳಿ ಬರಬೇಡಿ ನೀವು ಇದ್ದಲ್ಲೆ ನನಗೆ ಶುಭ ಕೋರಿ ಆಶೀರ್ವಾದಿಸಿ ಎಂದು ಗಣಿ ಮನವಿ ಮಾಡಿಕೊಂಡಿದ್ದಾರೆ.

ತಮ್ಮ ಹುಟ್ಟುಹಬ್ಬದ ವಿಚಾರವಾಗಿ ಟ್ವೀಟ್ ಮಾಡಿರುವ ಗಣೇಶ್ ಅವರು, ಪ್ರೀತಿಯ ಸ್ನೇಹಿತರೇ ಕೊರೊನಾ ಸೋಂಕಿನಿಂದಾಗಿ ಈ ವರ್ಷದ ನನ್ನ ಹುಟ್ಟುಹಬ್ಬವನ್ನು ನೇರವಾಗಿ ನಿಮ್ಮನ್ನು ಭೇಟಿಮಾಡಿ ಆಚರಿಸಿಕೊಳ್ಳಲು ಆಗುತ್ತಿಲ್ಲ. ಅದಕ್ಕಾಗಿ ಕ್ಷಮೆಯಿರಲಿ. ನಿಮ್ಮ ಪ್ರೀತಿ ಮತ್ತು ಹಾರೈಕೆ ಹಾಗೂ ಶುಭಾಶಯ ಸದಾ ನನ್ನ ಜೊತೆಯಿರಲಿ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಬರೆದುಕೊಂಡಿದ್ದಾರೆ.

ಜೊತೆಗೆ ನನ್ನೆಲ್ಲಾ ಅಭಿಮಾನಿಗಳೇ, ಬಂದುಗಳೇ, ಸ್ನೇಹಿತರೆ ಹಾಗೂ ಹಿತೈಷಿಗಳೇ ಈ ಕೊರೊನಾದ ಸಂಕಷ್ಟದ ಕಾಲದಲ್ಲಿ ರಾಜ್ಯದ ಎಲ್ಲ ಜಿಲ್ಲೆ ಮತ್ತು ತಾಲೂಕುಗಳಲ್ಲೂ ನೀವು ನೊಂದವರ, ಅಸಹಾಯಕರ, ಹಸಿದವರ ಬೆಂಬಲಕ್ಕೆ ನಿಂತಿರಿ. ಇದಕ್ಕೆ ಯಾವ ಪ್ರಚಾರವನ್ನೂ ಬಯಸದೆ ಸದ್ದುಗದ್ದಲವಿಲ್ಲದೆ ನಿಮ್ಮ ಮಾನವೀಯತೆಯನ್ನು ತೋರಿಸಿದೀರಾ. ಇದಕ್ಕಾಗಿ ನಾನು ನಿಮಗೆ ಆಭಾರಿಯಾಗಿದ್ದೇನೆ. ನಿಮ್ಮ ಕಾರ್ಯಗಳಿಗಾಗಿ ನಾನು ಹೆಮ್ಮೆ ಪಡುತ್ತೇನೆ ಎಂದು ಹೇಳಿದ್ದಾರೆ.

ನಿಮಗೆಲ್ಲ ಗೊತ್ತಿರುವ ಹಾಗೇ ಜುಲೈ 2ರಂದು ಪ್ರತಿವರ್ಷ ಸಾವಿರಾರು ಮಂದಿ ಬೆಂಗಳೂರಿಗೆ ಬಂದು ನನ್ನ ಜನ್ಮ ದಿನವನ್ನು ಅತ್ಯಂತ ಅದ್ಧೂರಿಯಾಗಿ ಆಚರಿಸಿದ್ದೀರಿ. ಇದಕ್ಕೆ ನಾನು ಸದಾ ಚಿರಋಣಿ. ಆದರೆ ಈ ವರ್ಷ ನನಗೆ ಶುಭಕೋರಲು ನನ್ನ ನಿವಾಸಕ್ಕೆ ಬರುವುದು ಬೇಡ. ನೀವೆಲ್ಲಿದ್ದೀರೋ ಅಲ್ಲಿಂದಲೆ ನನಗೆ ಶುಭಕೋರಿ ಆಶೀರ್ವಾದಿಸಿ ಎಂದು ಗಣಿ ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

ಆದರೆ ಈ ವರ್ಷ ಎಂದಿನಂತಿಲ್ಲ. ಕೊರೊನಾದಿಂದಾಗಿ ನಮ್ಮ ಬದುಕಿನ ಶೈಲಿಯೇ ಬದಲಾಗಿದೆ. ಲಕ್ಷಾಂತರ ಮಂದಿ ನಿರುದ್ಯೋಗಿಗಳಾಗಿದ್ದಾರೆ. ಬಡಜನರು ದೈನಂದಿನ ಬದುಕನ್ನು ಸಾಗಿಸುವುದಕ್ಕೆ ಕಷ್ಟ ಸಾಧ್ಯವಾಗಿದೆ. ನನ್ನ ನಾಡಿನ ಜನರು ಹೀಗೆ ಸಂಕಷ್ಟದಲ್ಲಿ ಇರುವಾಗ ವೈಭವದ ಹಟ್ಟುಹಬ್ಬ ಆಚರಣೆ ಯಾವುದೇ ಕಾರಣಕ್ಕೂ ಬೇಡವೆಂದು ನಿರ್ಧರಿಸಿದ್ದೇನೆ ಎಂದು ಗಣೇಶ್ ಅಭಿಪ್ರಾಯ ವ್ಯಕ್ತಿ ಪಡಿಸಿದ್ದಾರೆ.

ಹೊರ ಜಿಲ್ಲೆಗಳಿಂದ ನನ್ನ ಅಭಿಮಾನಿಗಳು ಈ ಸಮಯದಲ್ಲಿ ಬೆಂಗಳೂರಿಗೆ ಬರುವುದು ಬೇಡ. ನೀವು ನನಗಾಗಿ ಖರ್ಚು ಮಾಡುವ ಹಣವನ್ನು ಅದೇ ದಿನ ಬಡಕುಟುಂಬಗಳಿಗೆ ಸಹಾಯಹಸ್ತ ನೀಡಿ ಅದೇ ಅರ್ಥಪೂರ್ಣ ಆಚರಣೆಯಾಗುತ್ತದೆ ಎಂದು ತನ್ನ ಅಭಿಮಾನಿಗಳಿಗೆ ಗಣೇಶ್ ಮನವಿ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *