‘ಕೊರೊನಾ ಸೋಂಕಿತನ ಮೃತದೇಹದಿಂದ ವೈರಸ್ ಹರಡೋದಿಲ್ಲ’: ಯುಟಿ ಖಾದರ್

-ಅಂತ್ಯಸಂಸ್ಕಾರದಲ್ಲಿ ಕೆಲಸ ಮಾಡ್ಬೇಕೆಂಬ ಭಾವನೆ ಬಂದಿದ್ದಕ್ಕೆ ಪಾಲ್ಗೊಂಡೆ

ಮಂಗಳೂರು: ನಿನ್ನೆ ಪಿಪಿಇ ಕಿಟ್ ಇಲ್ಲದೇ ಕೊರೊನಾ ಸೋಂಕಿತನ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿದ್ದ ಶಾಸಕ ಯುಟಿ ಖಾದರ್ ಈ ಕುರಿತು ಸ್ಪಷ್ಟನೆ ನೀಡಿದ್ದು, ಅಂತ್ಯಸಂಸ್ಕಾರದಲ್ಲಿ ಕೆಲಸ ಮಾಡ್ಬೇಕೆಂಬ ಭಾವನೆ ಬಂದಿದ್ದಕ್ಕೆ ಪಾಲ್ಗೊಂಡೆ ಎಂದು ಹೇಳಿದ್ದಾರೆ.

ಅಂತ್ಯ ಸಂಸ್ಕಾರದಲ್ಲಿ ಪಿಪಿಇ ಕಿಟ್ ಧರಿಸದೆ ಭಾಗಿಯಾದ ಕುರಿತು ಸ್ಪಷ್ಟನೆ ನೀಡಿದ ಅವರು, ಅಂತ್ಯಸಂಸ್ಕಾರದಲ್ಲಿ ಕೆಲಸ ಮಾಡಬೇಕೆಂಬ ಭಾವನೆ ಬಂತು. ಆದ್ದರಿಂದ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದೇನೆ. ಸೋಂಕಿತನ ಮೃತದೇಹದಿಂದ ವೈರಸ್ ಹರಡುವುದಿಲ್ಲ. ಮೃತದೇಹದಿಂದ ವೈರಸ್ ಹರಡುತ್ತೆ ಎಂದು ವೈದ್ಯಕೀಯ ಅಧ್ಯಯನ ಹೇಳಿಲ್ಲ. ಆದ್ದರಿಂದ ಪಿಪಿಐ ಕಿಟ್‍ನ ಅಗತ್ಯ ಇಲ್ಲ ಎಂದು ಹೇಳಿದರು.

ಮೃತ ತಂದೆಯ ದೇಹವನ್ನು ಅಂತಿಮವಾಗಿ ನೋಡಲು ಸಹ ಮಕ್ಕಳು ಬರಲ್ಲ. ಜನ ಅಷ್ಟು ಭಯಭೀತರಾಗಿದ್ದಾರೆ. ಧಾರ್ಮಿಕ ವಿಧಿವಿಧಾನ ಮಾಡೋಕೆ ಜನರಿಗೆ ಹೆದರಿಕೆ ಇದೆ. ಕಾನೂನು ಪ್ರಕಾರ ಪಿಪಿಇ ಕಿಟ್ ಧರಿಸದೇ ಇರುವುದು ತಪ್ಪು. ಆದರೆ ನಾನು ಕೊರೊನಾ ಕುರಿತು ಜನರಿಗೆ ಮನವರಿಕೆ ಮಾಡಲು ಪಿಪಿಇ ಕಿಟ್ ಧರಿಸಿಲ್ಲ. ಜನರು ಧಾರ್ಮಿಕ ವಿಧಿವಿಧಾನ ಪ್ರಕಾರ ಅಂತ್ಯಕ್ರಿಯೆ ಮಾಡಬಹುದು ಎಂದರು.

ಇದೇ ವೇಳೆ ನಾಳೆ ರಾಜ್ಯದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಆರಂಭದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರ ಮುಂಜಾಗ್ರತೆಗೆ ಹೆಚ್ಚಿನ ಗಮನ ಕೊಡಬೇಕು. ಶಾಲೆಯ 50 ಮೀಟರ್ ಸುತ್ತಾ ಸಂಪೂರ್ಣ ಬಂದ್ ಮಾಡಬೇಕು. ವಿದ್ಯಾರ್ಥಿಗಳನ್ನು ಕರೆತರುವ ಪೋಷಕರ ಬಗ್ಗೆಯೂ ಗಮನಹರಿಸಬೇಕು. ಗ್ರಾಮ ಪಂಚಾಯಿತಿಗಳಿಗೆ ಶಾಲೆಯ ಸ್ಯಾನಿಟೈಸೇಷನ್ ಮಾಡುವ ಹೊಣೆ ಕೊಟ್ಟಿದ್ದಾರೆ. ಆದರೆ ಆರೋಗ್ಯ ಇಲಾಖೆ ಇದರ ಜವಾಬ್ದಾರಿ ತೆಗೆದುಕೊಳ್ಳಬೇಕು. ಜಿಲ್ಲೆಯಲ್ಲಿ ಸೆಲೂನ್‍ನಲ್ಲಿ ಬಳಸುವ ಸ್ಟ್ರೇ ಬಳಸಿ ಸ್ಯಾನಿಟೈಸೇಷನ್ ಮಾಡಲಾಗುತ್ತಿದೆ. ಇದನ್ನು ಜಿಲ್ಲಾಧಿಕಾರಿಗಳ ಗಮನಕ್ಕೂ ತಂದಿದ್ದೇನೆ ಎಂದರು.

ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಸರ್ಕಾರ ಎನ್‍ಜಿಒ,ಸಂಘ ಸಂಸ್ಥೆಗಳ ಸಭೆ ಕರೆಯಬೇಕು. ಮುಂದಕ್ಕೆ ಪರಿಸ್ಥಿತಿ ಮತ್ತೆ ಬಿಗಾಡಾಯಿಸುವ ಸಾಧ್ಯತೆ ಇರುವುದರಿಂದ ಜನ ಮತ್ತಷ್ಟು ಜಾಗರೂಕತೆಯಿಂದ ಇರಬೇಕಾಗುತ್ತದೆ. ಸರ್ಕಾರ ಜನರಿಗೆ ವೈರಸ್ ನೊಂದಿಗೆ ಬದುಕಲು ಹೇಳಿದೆ. ಆದರೆ ವೈರಸ್‍ಗೆ ಜನರ ಜೊತೆ ಬದುಕೋಕೆ ಗೊತ್ತಾಗಬೇಕಲ್ವಾ? ವೈರಸ್ ಜನರನ್ನು ಬಲಿ ಪಡೆಯುತ್ತಲೇ ಇದೆ ಎಂದು ಟೀಕಿಸಿದರು.

Comments

Leave a Reply

Your email address will not be published. Required fields are marked *