ರೈಲಿಗೆ ತಲೆಕೊಟ್ಟು ಯುವಕ ಆತ್ಮಹತ್ಯೆ- ಬೇರೆ ಬೇರೆಯಾಯ್ತು ರುಂಡ, ಮುಂಡ

ಯಾದಗಿರಿ: ಸಾಲಕ್ಕೆ ಹೆದರಿ ಯುವಕನೊಬ್ಬ ರೈಲು ಹಳಿಗೆ ತಲೆಕೊಟ್ಟು ಭೀಕರವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಾದಗಿರಿ ರೈಲು ನಿಲ್ದಾಣ ಸೇತುವೆ ಬಳಿ ತಡರಾತ್ರಿ ನಡೆದಿದೆ.

ಜಿಲ್ಲೆಯ ಶಹಪುರದ ಸದ್ದಾಂ ಹುಸೇನ್ (23) ಆತ್ಮಹತ್ಯೆ ಮಾಡಿಕೊಂಡ ಯುವಕ. ಸದ್ದಾಂ ಹುಸೇನ್ ಮೇಲೆ ವೇಗವಾಗಿ ರೈಲು ಹೋಗಿರುವ ಹಿನ್ನೆಲೆಯಲ್ಲಿ ಯುವಕನ ರುಂಡ ಒಂದು ಕಡೆ ಮತ್ತು ಮುಂಡ ಮತ್ತೊಂದು ಕಡೆ ಬಿದ್ದಿದೆ.

ಮೃತ ಸದ್ದಾಂ ಹುಸೇನ್ ಶಹಪುರದ ಖಾಸಗಿ ಫೈನಾನ್ಸ್‌ವೊಂದರಲ್ಲಿ ಸಾಲ ಪಡೆದುಕೊಂಡಿದ್ದನು. ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಆರ್ಥಿಕ ಸಮಸ್ಯೆಯಾಗಿ ಸಾಲ ಮರುಪಾವತಿ ಮಾಡಲು ಸಾಧ್ಯವಾಗಿಲ್ಲ. ಆದರೆ ಫೈನಾನ್ಸ್ ಕಂಪನಿಯಿಂದ ಸಾಲ ಮರುಪಾವತಿಸುವಂತೆ ನಿತ್ಯ ಸದ್ದಾಂ ಹುಸೇನ್‍ಗೆ ಕಿರುಕುಳ ನೀಡುತ್ತಿದ್ದರು ಎನ್ನಲಾಗುತ್ತಿದೆ.

ಇದರಿಂದ ನೊಂದ ಸದ್ದಾಂ ಹುಸೇನ್ ಮಂಗಳವಾರ ರಾತ್ರಿ ಯಾದಗಿರಿಗೆ ಬಂದಿದ್ದಾನೆ. ನಂತರ ರೈಲ್ವೆ ನಿಲ್ದಾಣದ ಸೇತುವೆ ಬಳಿ ಹಳಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ರಾಯಚೂರು ರೈಲ್ವೆ ಪೋಲಿಸ್ ಮತ್ತು ಯಾದಗಿರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *