ಕೆಟ್ಟ ಮೇಲೆ ಬುದ್ಧಿ ಕಲಿತ ರಾಜ್ಯ ಸರ್ಕಾರ – ಕ್ವಾರಂಟೈನ್ ಅವಧಿ ಮತ್ತೆ ವಿಸ್ತರಣೆ

ಬೆಂಗಳೂರು: ಕೊರೊನಾ ರಾಜ್ಯದಲ್ಲಿ ಸ್ಫೋಟಗೊಳ್ಳುತ್ತಲೇ ಬುದ್ಧಿ ಕಲಿತ ರಾಜ್ಯ ಸರ್ಕಾರ ಈ ಹಿಂದಿನ ಆದೇಶವನ್ನು ಮತ್ತೆ ಜಾರಿಗೊಳಿಸಿದೆ. ಹೊರ ರಾಜ್ಯದಿಂದ ಯಾರೇ ಬಂದರೂ ಅವರು 14 ದಿನಗಳ ಕಾಲ ಕ್ವಾರಂಟೈನ್ ಇರಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಹೇಳಿದ್ದಾರೆ.

ರಾಜ್ಯದಲ್ಲಿ ಕೊರೊನಾ ಸೋಂಕಿತರು ಹಾಗೂ ಮೃತರ ಸಂಖ್ಯೆ ಹೆಚ್ಚಾಗುತ್ತಲೇ. ಕೋವಿಡ್-19 ನಿಯಂತ್ರಣಕ್ಕೆ ಸಿಗದೆ ಕಳೆದ ಕೆಲ ದಿನಗಳಿಂದ ಪ್ರತಿನಿತ್ಯವೂ 200ಕ್ಕೂ ಹೆಚ್ಚು ಜನರಿಗೆ ಸೋಂಕು ಪತ್ತೆಯಾಗುತ್ತಿದೆ. ಭಾನುವಾರವಷ್ಟೇ 453 ಜನರಿಗೆ ಸೋಂಕು ದೃಢಪಟ್ಟಿತ್ತು. ಇದರಿಂದಾಗಿ ಎಚ್ಚೆತ್ತ ರಾಜ್ಯ ಸರ್ಕಾರ ಕ್ವಾರಂಟೈನ್ ಅವಧಿಯನ್ನು ಮತ್ತೆ ವಿಸ್ತರಣೆ ಮಾಡಿದೆ.

 

ಈ ಕುರಿತು ಟ್ವೀಟ್ ಮಾಡಿರುವ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್, “ರಾಜ್ಯದಲ್ಲಿ ಶೇ.61.39 ರಷ್ಟು ಕೊರೊನಾ ರೋಗಿಗಳು ಗುಣಮುಖರಾಗುತ್ತಿದ್ದಾರೆ, ಮರಣ ಪ್ರಮಾಣವು ಶೇ.1.49 ರಷ್ಟಿದೆ. 24 ಗಂಟೆಗಳೊಳಗೆ ಕೊರೊನಾ ಪಾಸಿಟಿವ್ ಬಂದ ರೋಗಿ ಪ್ರಕರಣದಲ್ಲಿದ್ದ ಎಲ್ಲರನ್ನೂ ಪತ್ತೆಹಚ್ಚಿ ಕ್ವಾರಂಟೈನ್ ಮಾಡುತ್ತಿದ್ದೇವೆ. ಹಾಗೇ ಅಂತರರಾಜ್ಯದಿಂದ ಆಗಮಿಸಿದರನ್ನು 14 ದಿನಗಳವರೆಗೆ ಕ್ವಾರಂಟೈನ್ ಮಾಡಲಾಗುವುದು” ಎಂದು ತಿಳಿಸಿದ್ದಾರೆ.

ದೇಶದಲ್ಲಿ ಅತಿ ಹೆಚ್ಚು ಸೋಂಕಿತರನ್ನ ಹೊಂದಿರುವ ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರನ್ನ ಏಳು ದಿನ ಸಾಂಸ್ಥಿಕ ಕ್ವಾರಂಟೈನ್, ಏಳು ದಿನ ಹೋಂ ಕ್ವಾರಂಟೈನ್ ಗೆ ಒಳಪಡಿಸಲು ಸರ್ಕಾರ ನಿರ್ಧಾರ ಕೈಗೊಂಡಿದೆ. ಅದೇ ರೀತಿ ದೆಹಲಿ ಮತ್ತು ತಮಿಳುನಾಡಿನಿಂದ ಬರುವ ಪ್ರಯಾಣಿಕರು ಮೂರು ದಿನ ಸಾಂಸ್ಥಿಕ ಕ್ವಾರಂಟೈನ್ ಹನ್ನೊಂದು ದಿನ ಹೋಂ ಕ್ವಾರಂಟೈನ್.  ದೇಶದ ಇತರೆ ರಾಜ್ಯಗಳಿಂದ ಅಗಮಿಸುವ ಪ್ರಯಾಣಿಕರು ಕಡ್ಡಾಯ 14 ದಿನ ಹೋಂ ಕ್ವಾರಂಟೈನ್ ಇರಬೇಕೆಂದು ಸುಧಾಕರ್‌ ಟ್ವೀಟ್‌ ಮಾಡಿದ್ದಾರೆ.

ಈ ಹಿಂದೆ ಹೇಗಿತ್ತು?
ಆರಂಭದಲ್ಲಿ ಯಾವುದೇ ರಾಜ್ಯದಿಂದ ಬಂದರೂ 14 ದಿನಗಳ ಕಾಲ ಕ್ವಾರಂಟೈನ್ ಆಗುವುದು ಕಡ್ಡಾಯ ಮಾಡಲಾಗಿತ್ತು. ಇದಾದ ಬಳಿಕ ಕೊರೊನಾ ಹೈ ರಿಸ್ಕ್ ರಾಜ್ಯಗಳಾದ ಮಹಾರಾಷ್ಟ್ರ, ತಮಿಳುನಾಡು, ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶದಿಂದ ಬರುವವರಿಗೆ ಮಾತ್ರ 14 ದಿನ ಕ್ವಾರಂಟೈನ್ ಮಾಡಲಾಗುವುದು. ಉಳಿದ ರಾಜ್ಯಗಳಿಂದ ಬಂದವರು 14 ದಿನಗಳ ಕಾಲ ಹೋಂ ಕ್ವಾರಂಟೈನ್ ಆಗುವುದು ಕಡ್ಡಾಯ ಎಂದು ಆದೇಶಿಸಲಾಗಿತ್ತು.

ಹೋಮ್ ಕ್ವಾರಂಟೈನ್ ಎಂದರೆ ಮನೆಯಲ್ಲೇ ಪ್ರತ್ಯೇಕವಾಗಿರುವುದು. ಸಾಂಸ್ಥಿಕ ಕ್ವಾರಂಟೈನ್ ಎಂದರೆ ಸರ್ಕಾರ ನಿಗದಿ ಮಾಡಿದ ಜಾಗದಲ್ಲಿ 14 ದಿನಗಳ ಕಾಲ ವಾಸ್ತವ್ಯ ಇರುವುದು. ಸರ್ಕಾರ ಈಗ ಈ ಹಿಂದೆ ಜಾರಿ ಮಾಡಿದ್ದ ಮಾರ್ಗಸೂಚಿಯನ್ನು ಮತ್ತೆ ಅಳವಡಿಸಲು ಮುಂದಾಗಿದೆ.

Comments

Leave a Reply

Your email address will not be published. Required fields are marked *