ಆಕೆಯಿಲ್ಲದೆ ಬದುಕಲು ಸಾಧ್ಯವಿಲ್ಲವೆಂದು ಮನೆ ಬಿಟ್ಟು ಬಂದ- ಮಂಗಳಮುಖಿ ಜೊತೆ ಯುವಕ ಆತ್ಮಹತ್ಯೆ

– ಒಂದು ತಿಂಗಳಿಂದ ಒಟ್ಟಿಗೆ ವಾಸಿಸುತ್ತಿದ್ರು
– ಒಂದೇ ರೂಮಿನಲ್ಲಿ ಪ್ರೇಮಿಗಳು ನೇಣಿಗೆ ಶರಣು

ಚೆನ್ನೈ: ಯುವಕನೊಬ್ಬ ತನ್ನ ಪ್ರಿಯತಮೆ ಮಂಗಳಮುಖಿ ಜೊತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿದ ಪುದುಚೇರಿಯ ಕಾರೈಕಲ್ ಜಿಲ್ಲೆಯಲ್ಲಿ ನಡೆದಿದೆ.

ದಿಲೀಪ್ (26) ಮತ್ತು ಮಂಗಳಮುಖಿ ಶಿವಾನಿ (30) ಮೃತ ಪ್ರೇಮಿಗಳು. ಪೋಷಕರ ವಿರೋಧ ನಡುವೆಯೂ ಮೃತ ದಿಲೀಪ್ ಪ್ರಿಯತಮೆ ಶಿವಾನಿ ಜೊತೆ ಒಟ್ಟಿಗೆ ವಾಸ ಮಾಡುತ್ತಿದ್ದನು. ಆದರೆ ಇಬ್ಬರು ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಿರುನಲ್ಲರು ಮೂಲದ ದಿಲೀಪ್‍ಗೆ ಆರು ತಿಂಗಳ ಹಿಂದೆ ಶಿವಾನಿ ಪರಿಚಯವಾಗಿತ್ತು. ಇಬ್ಬರು ಸ್ನೇಹಿತರಾಗಿದ್ದು, ದಿನ ಕಳೆದಂತೆ ದಿಲೀಪ್ ಶಿವಾನಿಯನ್ನು ಪ್ರೀತಿಸುತ್ತಿದ್ದನು. ಶಿವಾನಿಯನ್ನು ಪ್ರೀತಿಸುತ್ತಿರುವ ವಿಚಾರ ದಿಲೀಪ್ ಪೋಷಕರಿಗೆ ಗೊತ್ತಾಗಿದೆ. ಇದರಿಂದ ಕೋಪಗೊಂಡ ದಿಲೀಪ್ ಪೋಷಕರು ಆತನಿಗೆ ಬೈದು, ಅವರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಶಿವಾನಿ ಇಲ್ಲದೇ ಬದುಕಲು ಸಾಧ್ಯವಿಲ್ಲ ಎಂದು ಪೋಷಕರಿಗೆ ದಿಲೀಪ್ ತಿಳಿಸಿದ್ದಾನೆ. ಆದರೆ ಮನೆಯಲ್ಲಿ ವಿರೋಧ ವ್ಯಕ್ತವಾಗಿದ್ದರಿಂದ ಒಂದು ತಿಂಗಳ ಹಿಂದೆ ದಿಲೀಪ್ ಮನೆ ಬಿಟ್ಟು ಹೋಗಿದ್ದಾನೆ. ನಂತರ ಶಿವಾನಿ ಜೊತೆ ಕಾರೈಕಲ್ ಜಿಲ್ಲೆಯ ಗ್ರಾಮವೊಂದರಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದನು.

ಇಬ್ಬರ ನಡುವೆ ಕೆಲವು ದಿನಗಳಿಂದ ಜಗಳ ನಡೆಯುತ್ತಿತ್ತು. ಶನಿವಾರ ಕೂಡ ಜಗಳ ಮಾಡಿಕೊಂಡಿದ್ದು, ರೂಮಿನಲ್ಲಿ ಇಬ್ಬರು ಫ್ಯಾನ್‍ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳೀಯರು ನೋಡಿ ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ.

ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ, ಮರಣೋತ್ತರ ಪರೀಕ್ಷೆಗಾಗಿ ಮೃತ ದೇಹಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *