54 ದಿನದ ಮಗಳನ್ನು ಬೆಡ್‍ನಿಂದ ನೆಲಕ್ಕೆ ಬಿಸಾಕಿದ ತಂದೆ- ಪುಟ್ಟ ಕಂದಮ್ಮನ ಸ್ಥಿತಿ ಗಂಭೀರ

– ಮೆದುಳಿನಲ್ಲಿ ರಕ್ತಸ್ರಾವ, ಜಜ್ಜಿ ಹೋದವು ಕಾಲುಗಳು

ತಿರುವನಂತಪುರಂ: ತಂದೆಯೇ 54 ದಿನದ ತನ್ನ ಪುಟ್ಟ ಕಂದಮ್ಮನನ್ನು ಕೊಲೆ ಮಾಡಲು ಯತ್ನಿಸಿರುವ ಅಮಾನವೀಯ ಘಟನೆಯೊಂದು ಕೇರಳದ ಜೊಸೆಪುರಂನ ಅಂಗಮಾಲಿ ಎಂಬಲ್ಲಿ ನಡೆದಿದೆ.

ತಂದೆ ತನ್ನ ಮಗಳನ್ನು ಬೆಡ್‍ನಿಂದ ನೆಲಕ್ಕೆ ಬಿಸಾಕಿದ ಪರಿಣಾಮ ಮಗುವಿನ ಸ್ಥಿತಿ ಗಂಭೀರವಾಗಿದೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹೆಣ್ಣು ಮಗುವಿಗೆ ಇಂದು ಸರ್ಜರಿ ನಡೆಯಲಿದೆ.

ತಂದೆಯ ಕೃತ್ಯದಿಂದ ತಲೆಗೆ ಗಂಭೀರ ಗಾಯಗಳಾಗಿದ್ದು, ಮೆದುಳಿನಲ್ಲಿ ರಕ್ತಸ್ರಾವವಾಗಿದೆ. ಕಾಲುಗಳು ಕೂಡ ಜಜ್ಜಿ ಹೋಗಿವೆ. ಸದ್ಯ ಮೆದುಳಿನಲ್ಲಿ ಆಗುತ್ತಿರುವ ರಕ್ತಸ್ರಾವ ನಿಯಂತ್ರಣಕ್ಕಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಾ. ಸೋಜನ್ ಅವರು ತಿಳಿಸಿದ್ದಾರೆ.

ಮಗುವಿನ ಪೋಷಕರು ಆಸ್ಪತ್ರೆಗೆ ಕರೆತಂದಾಗ ಆಕೆ ಪ್ರಜ್ಞಾಹೀನಳಾಗಿದ್ದಳು. ಅಲ್ಲದೆ ಮಗು ಮಂಚದಿಂದ ಕೆಳಗೆ ಬಿದ್ದು ಗಾಯಗಳಾಗಿವೆ ಎಂದು ಮೊದಲು ಹೇಳಿದ್ದಾರೆ. ಆದರೆ ಪೋಷಕರ ಮಾತು ಕೇಳಿ ಶಂಕೆ ವ್ಯಕ್ತಪಡಿಸಿದ ವೈದ್ಯರು, ಇಬ್ಬರನ್ನು ಮತ್ತಷ್ಟು ಪ್ರಶ್ನಿಸಿದ್ದಾರೆ. ಈ ವೇಳೆ ಅವರು, ಸೊಳ್ಳೆ ಬ್ಯಾಟ್ ಬಳಸುವ ವೇಳೆ ಆಕಸ್ಮಿಕವಾಗಿ ಮಗುವಿನ ಮೇಲೆ ಗಾಯಗಳಾಗಿವೆ ಎಂದು ಸುಳ್ಳು ಹೇಳಿದ್ದಾರೆ. ಪೋಷಕರ ಹೇಳಿಕೆಯಿಂದ ಮತ್ತಷ್ಟು ಶಂಕೆ ವ್ಯಕ್ತಪಡಿಸಿದ ಆಸ್ಪತ್ರೆಯ ಅಧಿಕಾರಿಗಳು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರಿಗೆ ಮಾಹಿತಿ ನೀಡಿ 2 ಗಂಟೆಯೊಳಗೆ ಪುಥೆನ್ ಕುರಿಶ್ ಪೊಲೀಸರು, ಮಗುವಿನ ಪೋಷಕರ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

ನಡೆದಿದ್ದೇನು?
ಅಂಗಮಾಲಿ ನಿವಾಸಿ ಶೈಜು ಥೋಮಸ್(40) ತನ್ನ 54 ದಿನಗಳನ್ನು ಕೊಲೆ ಮಾಡಲು ಯತ್ನಿಸಿದ್ದಾನೆ. ತನ್ನ ಮಗುವಲ್ಲ ಎಂದು ಶಂಕೆ ವ್ಯಕ್ತಪಡಿಸಿ ಹಾಗೂ ಹೆಣ್ಣು ಮಗುವೆಂಬ ಕಾರಣಕ್ಕೆ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಈ ಘಟನೆ ಗುರುವಾರ ಮುಂಜಾನೆ 4 ಗಂಟೆ ಸುಮಾರಿಗೆ ನಡೆದಿದ್ದು, ಮಗು ಜೋರಾಗಿ ಅಳುತ್ತಿದ್ದರಿಂದ ಸಿಟ್ಟುಗೊಂಡು ಮಗುವನ್ನು ಬೆಡ್ ನಿಂದ ಬಿಸಾಕಿದ್ದಾನೆ. ಅಲ್ಲದೆ ಅಳುತ್ತಿದ್ದ ಮಗುವನ್ನು ಸಮಾಧಾನ ಪಡಿಸುತ್ತಿದ್ದ ತಾಯಿಯ ಕೈಯಿಂದ ಬಲವಂತವಾಗಿ ಮಗುವನ್ನು ಎಳೆದು, ಪುಟ್ಟ ಕಂದಮ್ಮನ ತಲೆಗೆ ತನ್ನ ಕೈಯಿಂದ ಎರಡು ಬಾರಿ ಹೊಡೆದಿದ್ದಾನೆ ಎಂಬುದಾಗಿ ವರದಿಯಾಗಿದೆ.

ಶೈಜು ಪತ್ನಿ ಮೂಲತಃ ನೇಪಾಳದವರು. ಫೇಸ್ ಬುಕ್ ಮೂಲಕ ಪರಿಚಯವಾಗಿ ಇಬ್ಬರೂ ಕಳೆದ ವರ್ಷವಷ್ಟೇ ಮದುವೆ ಮಾಡಿಕೊಂಡಿದ್ದರು. ಕಳೆದ 10 ತಿಂಗಳ ಹಿಂದೆ ಜೊಸೆಪುರಂನ ಅಂಗಮಾಲಿ ಎಂಬಲ್ಲಿ ದಂಪತಿ ವಾಸವಾಗಿದ್ದರು. ರಾತ್ರಿ ಮಲಗಿದ್ದ ಸಂದರ್ಭದಲ್ಲಿ ಮಗು ಅತ್ತಿದ್ದರಿಂದಲೇ ಸಿಟ್ಟುಗೊಂಡು ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ.

Comments

Leave a Reply

Your email address will not be published. Required fields are marked *