ಮಲೆನಾಡಿನಲ್ಲಿ ಉತ್ತಮ ಮಳೆ- ಬಂಡೆಗಳ ಮಧ್ಯದಿಂದ ಹರಿಯುತ್ತಿರೋ ಜಲಧಾರೆ

ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ಮುಂಗಾರು ಮಳೆ ಆರಂಭವಾಗಿದ್ದು, ಜಿಲ್ಲೆಯ ಹಲವೆಡೆ ಕಳೆದ ನಾಲ್ಕೈದು ದಿನಗಳಿಂದ ಮಳೆಯಾಗುತ್ತಿದೆ.

ಜಿಲ್ಲೆಯ ಸಂಪೂರ್ಣ ಮಲೆನಾಡಿನ ಭಾಗವಾದ ತೀರ್ಥಹಳ್ಳಿ, ಹೊಸನಗರ ಹಾಗೂ ಸಾಗರ ಭಾಗಗಳಲ್ಲಿ ಉತ್ತಮ ಮಳೆ ಆಗುತ್ತಿದೆ. ಅತಿಯಾದ ಮಳೆಯ ಕಾರಣ ಹೊಸನಗರ ತಾಲೂಕಿನ ಹುಲಿಕಲ್ ಬಳಿ ರಸ್ತೆಯ ಅಕ್ಕಪಕ್ಕದ ಕಲ್ಲು ಬಂಡೆಗಳ ಮಧ್ಯದಿಂದಲೂ ನೀರು ಹರಿಯುತ್ತಿದ್ದು, ಜಲಪಾತ ಎಂಬಂತೆ ನೋಡುಗರಿಗೆ ಭಾಸವಾಗುತ್ತಿದೆ.

ಈ ಮಾರ್ಗದ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಕೆಲಕಾಲ ತಮ್ಮ ವಾಹನವನ್ನು ನಿಲ್ಲಿಸಿ, ಈ ಜರಿ ರೂಪದ ಜಲಪಾತವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಮಳೆಗಾಲದಲ್ಲಿ ಮಾತ್ರ ಕಾಣಸಿಗುವ ಈ ದೃಶ್ಯವನ್ನು ನೋಡಿ ಎಂಜಾಯ್ ಮಾಡುತ್ತಿದ್ದಾರೆ.

ಕೊಡಗು ಜಿಲ್ಲೆಯಲ್ಲೂ ಮುಂಗಾರು ಪ್ರಾರಂಭವಾಗಿದ್ದು, ರಾತ್ರಿಯಿಂದ ಜಿಲ್ಲೆಯಾದ್ಯಂತ ಉತ್ತಮ ಮಳೆ ಆಗುತ್ತಿದೆ. ಜಿಲ್ಲೆಯಲ್ಲಿ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿದ್ದು. ಇದೀಗ ಧಾರಾಕಾರವಾಗಿ ಮಡಿಕೇರಿ ನಗರದಲ್ಲಿ ಮಳೆಯಾಗುತ್ತಿದೆ. ಬಿಡುವು ಕೊಟ್ಟು ಸುರಿಯುತ್ತಿರುವ ಗಾಳಿ-ಮಳೆಗೆ ಕೊಡಗು ಅಕ್ಷರಶಃ ಕೆಲವು ಭಾಗದಲ್ಲಿ ಮಂಜು ಮುಸುಕಿದ ವಾತಾವರಣವಿದೆ.

ಬ್ರಹ್ಮಗಿರಿ ತಪ್ಪಲು, ಪುಷ್ಪಗಿರಿ, ಭಾಗಮಂಡಲ, ತಲಕಾವೇರಿ, ನಾಪೋಕ್ಲು ಹಾಗೂ ವಿರಾಜಪೇಟೆ ಭಾಗದಲ್ಲಿ ಮಳೆ ತುಸು ಬಿರುಸು ಪಡೆದುಕೊಂಡಿದೆ. ಉತ್ತಮ ಮಳೆ ಆಗುತ್ತಿರುವುದರಿಂದ ಕಾವೇರಿಯಲ್ಲೂ ನೀರಿನ ಹರಿವು ಹೆಚ್ಚಾಗುತ್ತಿದೆ. ಅಲ್ಲದೆ ಜಿಲ್ಲೆಯ ಪ್ರಮುಖ ಹಾರಂಗಿ ಜಲಾಶಯದಲ್ಲೂ ನೀರಿನ ಒಳ ಹರಿವಿನ ಪ್ರಮಾಣ ಏರಿಕೆಯಾಗುತ್ತಿದೆ. ಹಾಗೆಯೇ ಕೃಷಿ ಚಟುವಟಿಕೆಗಳು ಗರಿಗೆದರಿದ್ದು, ರೈತರಲ್ಲೂ ಉತ್ಸಾಹ ಮನ ಮಾಡಿದೆ.

Comments

Leave a Reply

Your email address will not be published. Required fields are marked *