ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ಯದುವೀರ್ ದಂಪತಿ

ಮೈಸೂರು: ಸೋಮವಾರದಿಂದ ಚಾಮುಂಡಿ ಬೆಟ್ಟದಲ್ಲಿನ ಚಾಮುಂಡೇಶ್ವರಿ ದೇವಿಯ ದರ್ಶನ ಆರಂಭವಾಗಿದೆ. ಹೀಗಾಗಿ ಇಂದು ಚಾಮುಂಡಿ ಬೆಟ್ಟದಲ್ಲಿ ಎರಡನೇ ದಿನದ ದರ್ಶನ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟಕ್ಕೆ ರಾಜವಂಶಸ್ಥ ಯದುವೀರ್ ದಂಪತಿ ಭೇಟಿ ನೀಡಿದ್ದಾರೆ.

ಸುಮಾರು 70 ದಿನಗಳ ನಂತರ ಯದುವೀರ್ ದಂಪತಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ. ನಂತರ ಯದುವೀರ್ ಮತ್ತು ಪತ್ನಿ ತ್ರಿಶಿಕಾ ಕುಮಾರಿ ದೇವಿ ನಾಡದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಇದೇ ವೇಳೆ ಮಾತನಾಡಿದ ಯದುವೀರ್, ಲಾಕ್‍ಡೌನ್ ಸಂದರ್ಭದಲ್ಲಿ ನಮ್ಮ ಜೀವನದಲ್ಲಿ ತುಂಬಾ ಬದಲಾವಣೆಯಾಗಿದೆ. ಈಗ ಲಾಕ್‍ಡೌನ್ ಸಡಿಲಿಕೆಯಿಂದ ಎಲ್ಲ ದೇವಾಲಯಗಳು ಓಪನ್ ಆಗಿದೆ. ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸಿ ಕೊರೊನಾ ವಿರುದ್ಧ ಹೋರಾಟ ಮಾಡಬೇಕಿದೆ. ಎಲ್ಲರೂ ಸರಿಯಾಗಿ ಸರ್ಕಾರ ನಿಯಮ ಪಾಲಿಸಿ. ಕೊರೊನಾ ವಿರುದ್ಧ ಗೆಲ್ಲೋಣ ಎಂದು ಹೇಳಿದರು.

ಆಷಾಢ ಪೂಜೆಯನ್ನು ದೊಡ್ಡ ಮಟ್ಟದಲ್ಲಿ ಮಾಡುವುದು ಕಷ್ಟವಾಗುತ್ತದೆ ಎಂಬುದು ನನ್ನ ಅಭಿಪ್ರಾಯ. ಇಲ್ಲಿನ ವಿಧಿ-ವಿಧಾನಗಳಿಗೆ ನಾವು ಮೊದಲು ಆದ್ಯತೆ ಕೊಡಬೇಕು. ಜೊತೆಗೆ ಜನರ ಆರೋಗ್ಯವೂ ನಮಗೆ ಮುಖ್ಯವಾಗಿದೆ. ಹೀಗಾಗಿ ಜನರ ಸುರಕ್ಷತೆಯನ್ನು ಕಾಪಾಡಿಕೊಂಡು ದೇವಸ್ಥಾನದ ವಿಧಿ-ವಿಧಾನಗಳನ್ನು ಅನುಸರಿಸುವುದು ಉತ್ತಮ ಎಂದು ಹೇಳಿದರು.

Comments

Leave a Reply

Your email address will not be published. Required fields are marked *