ಮೈಲಾಪುರದ ಮೈಲಾರಲಿಂಗೇಶ್ವರ ದೇವಾಲಯ ತೆರೆಯುವುದು ಅನುಮಾನ

– ಇನ್ನೂ ಎರಡ್ಮೂರು ವಾರ ಬಿಟ್ಟು ತೆರೆಯುವಂತೆ ಅರ್ಚಕ ಒತ್ತಾಯ

ಯಾದಗಿರಿ: ರಾಜ್ಯಾದ್ಯಂತ ಜೂನ್ 8ರಿಂದ ದೇವಸ್ಥಾನ ತೆರೆಯಲು ಸರ್ಕಾರ ಅವಕಾಶ ನೀಡಿದ್ದರೂ, ಜಿಲ್ಲೆಯ ಪ್ರಸಿದ್ಧ ಮೈಲಾಪುರದ ಮೈಲಾರಲಿಂಗೇಶ್ವರ ದೇವಾಲಯ ತೆರೆಯುವುದು ಅನುಮಾನವಿದೆ.

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ ಮತ್ತು ಮೈಲಾಪುರ ಗ್ರಾಮದ ಪಕ್ಕದ ಹಳ್ಳಿಗಳ ಕ್ವಾರಂಟೈನ್ ಕೇಂದ್ರಗಳಲ್ಲಿ ಕೊರೊನಾ ಪ್ರಕರಣಗಳು ಪತ್ತೆಯಾದ ಹಿನ್ನೆಲೆ ಮಲ್ಲಯ್ಯನ ಭಕ್ತರಿಗೆ ದರ್ಶನ ಭಾಗ್ಯ ಸಿಗುವುದು ಅನುಮಾನವಿದೆ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಪ್ರದೇಶ ಮತ್ತು ತೆಲಂಗಾಣದಿಂದ ಸಹ ಲಕ್ಷಾಂತರ ಭಕ್ತರು ಈ ದೇವಸ್ಥಾನಕ್ಕೆ ಆಗಮಿಸುತ್ತಾರೆ.

ದೇವಸ್ಥಾನ ತೆರೆದರೆ ಹೊರ ರಾಜ್ಯದ ಭಕ್ತರು ಹೆಚ್ಚಾಗಿ ಬರುವ ಭೀತಿಯಿದೆ. ಹೀಗಾಗಿ ಭಕ್ತರ ಆರೋಗ್ಯದ ಕಾಳಜಿ ದೃಷ್ಟಿಯಿಂದ ದೇವಾಲಯ ತೆರೆಯದಿರಲು ಜಿಲ್ಲಾಡಳಿತ ಚಿಂತನೆ ನಡೆಸಿದೆ. ಅಲ್ಲದೆ ದೇವಸ್ಥಾನದ ಅರ್ಚಕರು, ಗ್ರಾಮಸ್ಥರು ಮತ್ತು ಭಕ್ತರ ಅಭಿಪ್ರಾಯ ಸಂಗ್ರಹಣೆಗೂ ಸಹ ಜಿಲ್ಲಾಡಳಿತ ಮುಂದಾಗಿದೆ. ದೇವಸ್ಥಾನಕ್ಕೆ ಹಾಕಿದ ಬೀಗ ಇನ್ನೂ ಹಾಗೇ ಇದ್ದು, ನಾಳೆ ದೇವಸ್ಥಾನ ತೆರೆಯಲು ಯಾವುದೇ ಸಿದ್ಧತೆ ನಡೆದಿಲ್ಲ. ಮತ್ತೊಂದು ಕಡೆ ಇನ್ನೂ ಎರಡು ವಾರಗಳ ಕಾಲ ದೇವಸ್ಥಾನ ತೆರೆಯದಂತೆ ಅರ್ಚಕರು ಒತ್ತಾಯಿಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *