ಜಾತಿ ನಿಂದನೆ ಆರೋಪ- ಯುವರಾಜ್ ಸಿಂಗ್ ವಿರುದ್ಧ ದೂರು ದಾಖಲು

-ರೋಹಿತ್ ಶರ್ಮಾ ಕೂಡ ಟಾರ್ಗೆಟ್

ನವದೆಹಲಿ: ಟೀಂ ಇಂಡಿಯಾ ಮಾಜಿ ಆಲ್‍ರೌಂಡರ್ ಯುವರಾಜ್ ಸಿಂಗ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಲಾಗಿದೆ. ಟೀಂ ಇಂಡಿಯಾ ಸ್ಟಾರ್ ಸ್ಪಿನ್ನರ್ ಯಜುವೇಂದ್ರ ಚಹಲ್ ಬಗ್ಗೆ ತಮಾಷೆಯಾಗಿ ಮಾಡಿದ್ದ ಕಾಮೆಂಟ್ ಸದ್ಯ ಅವರಿಗೆ ಹೊಸ ತಲೆನೋವು ತಂದಿದ್ದು, ಹೊಸ ವಿವಾದಕ್ಕೆ ಕಾರಣವಾಗಿದೆ.

ಯುವರಾಜ್ ಸಿಂಗ್ ವಿರುದ್ಧ ಹರಿಯಾಣ ದಲಿತ ಹಕ್ಕು ಸೇನೆಯ ಮುಖಂಡ, ವಕೀಲ ರಜತ್ ಕಲ್ಸನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇತ್ತೀಚೆಗೆ ರೋಹಿತ್ ಶರ್ಮಾರೊಂದಿಗೆ ಇನ್‍ಸ್ಟಾ ಲೈವ್‍ನಲ್ಲಿ ಮಾತನಾಡಿದ್ದ ಯುವಿ, ಚಹಲ್, ಜಡೇಜಾರ ಟಿಕ್‍ಟಾಕ್ ವಿಡಿಯೋಗಳ ಕುರಿತು ಪ್ರತಿಕ್ರಿಯೆ ನೀಡಿದ್ದರು. ‘ಈ ಭಂಗಿ ಜನರಿಗೆ ಮಾಡಲು ಬೇರೆ ಕೆಲಸವಿಲ್ಲ ಎನಿಸುತ್ತಿದೆ. ಆದ್ದರಿಂದಲೇ ಕುಟುಂಬ ಸದಸ್ಯರೊಂದಿಗೆ ಟಿಕ್ ಟಾಕ್ ಮಾಡುತ್ತಿದ್ದಾರೆ’ ಎಂದಿದ್ದರು. ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದಂತೆ ಆಕ್ರೋಶ ವ್ಯಕ್ತಪಡಿಸಿದ್ದ ನೆಟ್ಟಿಗರು ಯುವಿ ಕ್ಷಮೆ ಕೋರಬೇಕೆಂದು ಆಗ್ರಹಿಸಿದ್ದರು.

ಸದ್ಯ ಹರಿಯಾಣದ ಹನ್ಸಿ ಪ್ರದೇಶದ ಪೊಲೀಸ್ ಯುವರಾಜ್ ಸಿಂಗ್ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಲಾಗಿದ್ದು, ಈ ಪ್ರಕರಣದಲ್ಲಿ ರೋಹಿತ್ ಶರ್ಮಾರನ್ನು ಟಾರ್ಗೆಟ್ ಮಾಡಿದ್ದಾರೆ. ಯುವಿ ಹೇಳಿಕೆಯನ್ನು ರೋಹಿತ್ ಏಕೆ ತಡೆಯಲಿಲ್ಲ ಎಂದು ರಜತ್ ಪ್ರಶ್ನಿಸಿದ್ದು, ಅವರ ಈ ಹೇಳಿಕೆಯಿಂದ ದಲಿತ ಸಮುದಾಯದ ಜನರ ಭಾವನೆಗಳಿಗೆ ನೋವುಂಟಾಗಿದೆ ಎಂದಿದ್ದಾರೆ. ಅಲ್ಲದೇ ಯುವಿ ಮಾತನಾಡಿದ್ದ ವಿಡಿಯೋ ಸಂಬಂಧಿತ ದಾಖಲೆಗಳನ್ನು ಪೊಲೀಸರಿಗೆ ದೂರಿನೊಂದಿಗೆ ಸಲ್ಲಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಹನ್ಸಿ ಎಸ್‍ಪಿ ಲೋಕೇಂದ್ರ ಸಿಂಗ್, ಈ ಕುರಿತ ವಿಚಾರಣೆಗೆ ಸಂಬಂಧಿಸಿದ ಮಾಹಿತಿಯನ್ನು ಡಿಜಿಪಿಐ ಅವರಿಗೆ ನೀಡಲಾಗಿದೆ. ಯುವಿ ತಪ್ಪು ಮಾಡಿರುವುದು ಸ್ಪಷ್ಟವಾದರೆ ಕಾನೂನಿನ ಅನ್ವಯ ಕ್ರಮಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *