ನಟಿ ರಮ್ಯಾ ಅಭಿಮಾನಿಗಳಿಗೆ ಗುಡ್‍ನ್ಯೂಸ್- ಮತ್ತೆ ಫೇಸ್‍ಬುಕ್‍ಗೆ ಮರಳಿದ ಪದ್ಮಾವತಿ

– ಆನೆ ಕೊಂದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗೆ ಸಹಿ ಅಭಿಯಾನ

ಬೆಂಗಳೂರು: ಸ್ಯಾಂಡಲ್‍ವುಡ್ ನಟಿ, ಮಂಡ್ಯ ಮಾಜಿ ಸಂಸದೆ ರಮ್ಯಾ ಬರೋಬ್ಬರಿ ವರ್ಷದ ಬಳಿಕ ಸಾಮಾಜಿಕ ಜಾಲತಾಣಕ್ಕೆ ವಾಪಸ್ ಆಗಿದ್ದಾರೆ. ಕಳೆದೊಂದು ವರ್ಷದಿಂದ ಸಾಮಾಜಿಕ ಜಾಲತಾಣದಲ್ಲಿ ನಾಪತ್ತೆಯಾಗಿದ್ದ ಮೋಹಕ ತಾರೆ ಮತ್ತೆ ಆ್ಯಕ್ಟಿವ್ ಆಗಿದ್ದಾರೆ.

ಕೇರಳದಲ್ಲಿ ಪೈನಾಪಲ್‍ನಲ್ಲಿ ಪಟಾಕಿ ಇಟ್ಟು ಗರ್ಭಿಣಿ ಆನೆಯನ್ನು ಹತ್ಯೆ ಮಾಡಿರುವುದನ್ನು ರಮ್ಯಾ ಖಂಡಿಸಿದ್ದು, ಆನೆಯನ್ನು ಹತ್ಯೆ ಮಾಡಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ನಡೆಯುತ್ತಿರುವ ಸಹಿ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ.

ಸದ್ಯ ಫೇಸ್‍ಬುಕ್‍ನಲ್ಲಿ ಸಕ್ರಿಯರಾಗುವ ಮೂಲಕ ಸಾಮಾಜಿಕ ಜಾಲತಾಣಕ್ಕೆ ರೀ ಎಂಟ್ರಿ ಕೊಟ್ಟಿರುವ ರಮ್ಯಾ ಅವರು, ನೀವೆಲ್ಲರೂ ಚೆನ್ನಾಗಿದ್ದೀರಿ ಎಂದು ಭಾವಿಸುತ್ತೇನೆ. ಸ್ಟೇ ಸೇಫ್! ಈ ಅಭಿಯಾನಕ್ಕೆ ಸಹಿ ಹಾಕಿ ಎಂದು ಬರೆದುಕೊಂಡಿದ್ದಾರೆ.

ರಮ್ಯಾ ಅವರು 2019ರ ಮೇ 29 ರಂದು ಕೊನೆಯಾಗಿ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಇತ್ತ 2019ರ ಜೂನ್ 1 ರಂದು ಕೊನೆಯ ಬಾರಿಗೆ ರಮ್ಯಾ ಟ್ವೀಟ್ ಮಾಡಿದ್ದರು. ಕಳೆದೊಂದು ವರ್ಷದಿಂದ ಅವರು ಎಲ್ಲಿದ್ದರೂ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಿರಲಿಲ್ಲ. 2016ರ ನಾಗರಹಾವು ರಮ್ಯಾ ಅವರ ಕೊನೆಯ ಸಿನಿಮಾ ಆಗಿದೆ. ಆ ಬಳಿಕ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದ ಅವರು, ಸಂಸದೆಯಾಗಿ ಆಯ್ಕೆ ಆಗಿದ್ದರು. ತಮ್ಮ ಅವಧಿ ಮುಗಿದ ಬಳಿಕ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಮುಖ್ಯಸ್ಥರಾಗಿದ್ದರು.

ಏನಿದು ಆನೆ ಕೊಂದ ಪ್ರಕರಣ: ಆಹಾರ ಅರಸಿ ಗ್ರಾಮಕ್ಕೆ ಬಂದಿದ್ದ ಗರ್ಭಿಣಿ ಆನೆಗೆ ಪಾಪಿಗಳು ಪೈನಾಪಲ್ ಹಣ್ಣಿನ ಒಳಗಡೆ ಪಟಾಕಿ ಇಟ್ಟು ತಿನ್ನಿಸಿದ್ದು, ಪಟಾಕಿ ಸಿಡಿದು ಆನೆ ಮೃತಪಟ್ಟಿತ್ತು. ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಬುಧವಾರ ಘಟನೆ ನಡೆದಿತ್ತು. ಆನೆಯ ಬಾಯಿಯಲ್ಲಿ ಪಟಾಕಿ ಬ್ಲಾಸ್ಟ್ ಆಗಿದ್ದ ಪರಿಣಾಮ ನೋವಿನಲ್ಲಿ ರಸ್ತೆ ತುಂಬಾ ಆನೆ ಓಡಾಡಿತ್ತು. ಅಲ್ಲದೇ ನೋವಿಗೆ ವೆಲ್ಲಿಯಾರ್ ನದಿಯಲ್ಲಿ ಮುಳುಗಿತ್ತು. ಈ ಸುದ್ದಿ ತಿಳಿಯುತ್ತಿದ್ದಂತೆ ಆನೆಯನ್ನು ಮೇಲೆತ್ತಲು ಅರಣ್ಯ ಇಲಾಖೆ ಅಧಿಕಾರಿಗಳು ನೀಲಕಂಠನ್ ಹಾಗೂ ಸುರೇಂದ್ರನ್ ಎಂಬ ಎರಡು ಆನೆಗಳನ್ನು ಕರೆ ತಂದಿದ್ದು, ಅಷ್ಟೊತ್ತಿಗಾಗಲೇ ಸಂಜೆ 4ರ ಸುಮಾರಿಗೆ ಆನೆ ನದಿಯಲ್ಲೇ ಸಾವನ್ನಪ್ಪಿತ್ತು. ಈ ಕುರಿತ ವಿಡಿಯೋವನ್ನು ಅರಣ್ಯಾಧಿಕಾರಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

Comments

Leave a Reply

Your email address will not be published. Required fields are marked *