ಕೊರೊನಾ ವಾರಿಯರ್ಸ್ ಮೇಲೂ ಮಹಾಮಾರಿ ಕೊರೊನಾ ಕರಿನೆರಳು

ಬಳ್ಳಾರಿ: ಗಣಿನಾಡಿನ ಬಳ್ಳಾರಿ ಜಿಲ್ಲಾ ಕೋವಿಡ್ ಆಸ್ಪತ್ರೆಯ ಐಸೊಲೇಷನ್ ವಾರ್ಡಿನಲ್ಲಿ ಕೊರೊನಾ ವಾರಿಯರ್ಸ್ ಸೇವೆಯಲ್ಲಿ ತೊಡಗಿಕೊಂಡಿದ್ದ ಪುರುಷ ಸ್ಟಾಫ್ ನರ್ಸ್ ಒಬ್ಬರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ಇದಕ್ಕೂ ಮುನ್ನ ಗಣಿ ಜಿಲ್ಲೆಯಲ್ಲಿ 36 ಪಾಸಿಟಿವ್ ಕೇಸ್‍ಗಳಿದ್ದವು. ಇದೀಗ ಅದರ ಸಂಖ್ಯೆ 37ಕ್ಕೆ ಜಿಗಿದಿದೆ. ಈವರೆಗೂ 15 ಮಂದಿ ಗುಣಮುಖರಾಗಿದ್ದು, ಕೇವಲ ಒಬ್ಬರು ಮಾತ್ರ ಸಾವನ್ನಪ್ಪಿದ್ದಾರೆ. ಐಸೊಲೇಷನ್ ನಲ್ಲಿರುವವರ ಸಂಖ್ಯೆ 21ಕ್ಕೇ ಏರಿಕೆಯಾಗಿದೆ.

ಜಿಲ್ಲಾ ಕೋವಿಡ್ ಆಸ್ಪತ್ರೆಯ ಐಸೊಲೇಷನ್ ಸೇವೆಯಲ್ಲಿ ತೊಡಗಿಕೊಂಡಿದ್ದ 14 ಮಂದಿಯನ್ನು ನಿನ್ನೆಯ ದಿನ ಗಂಟಲು ದ್ರವ ಮತ್ತು ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆ ಪೈಕಿ 13 ನೆಗೆಟಿವ್ ಬಂದಿದ್ದು, ಕೇವಲ ಒಂದು ಮಾತ್ರ ಪಾಸಿಟಿವ್ ಬಂದಿದೆ. ಕಳೆದ 14 ದಿನಗಳ ಕಾಲ ಕೊರೊನಾ ವಾರ್ಡಿನಲ್ಲಿ ಡಿ ಗ್ರೂಪ್ ನೌಕರರಿಗೆ ಟೆಸ್ಟ್ ಮಾಡಲಾಗಿತ್ತು. ವರದಿ ಬಂದ ಬಳಿಕ ಕೊರೊನಾ ಪಾಸಿಟಿವ್ ಬಂದಿರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.

ಈ ಮೂಲಕ ಕೊರೊನಾ ವಾರಿಯರ್ಸ್ ಗೂ ಸೋಂಕು ತಗುಲಿದ್ದು ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ. ಐಸೊಲೇಷನ್ ವಾರ್ಡಿನಲ್ಲಿ ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿದ್ದರೂ ಕೊರೊನಾ ವಾರಿಯರ್ಸ್ ಗೆ ಸೋಂಕು ತಗುಲಿದ್ದು ಹೇಗೆ ಎನ್ನುವುದು ಮಾತ್ರ ಈವರೆಗೂ ನಿಗೂಢವಾಗಿದೆ.

Comments

Leave a Reply

Your email address will not be published. Required fields are marked *