ಅಲ್ಲು ಅರ್ಜುನ್‍ಗೆ ನಿರ್ದೇಶನ ಮಾಡುವಂತೆ ಸ್ಟಾರ್ ನಿರ್ದೇಶಕನಿಗೆ 13 ಕೋಟಿ ಆಫರ್

ಹೈದರಾಬಾದ್: ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್‍ಗೆ ಸಿನಿಮಾ ನಿರ್ದೇಶನ ಮಾಡುವಂತೆ ಅವರ ತಂದೆ ಅಲ್ಲು ಅರವಿಂದ್ ಸ್ಟಾರ್ ನಿರ್ದೇಶಕರೊಬ್ಬರಿಗೆ ಬರೋಬ್ಬರಿ 13 ಕೋಟಿ ರೂಪಾಯಿ ಆಫರ್ ನೀಡಿದ್ದಾರೆ ಎಂಬ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

ನಟ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಖ್ಯಾತ ನಿರ್ದೇಶಕ ಕೊರಟಾಲ ಶಿವ ಅವರಿಗೆ ಆಫರ್ ನೀಡಿದ್ದಾರೆ ಎಂದು ತಿಳಿದುಬಂದಿದೆ. ಕೊರಟಾಲ ಶಿವ ಅವರು ಟಾಲಿವುಡ್‍ನಲ್ಲಿ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಹೀಗಾಗಿ ಅಲ್ಲು ಅರವಿಂದ್ ತನ್ನ ಪುತ್ರನಿಗೂ ಸಿನಿಮಾ ಮಾಡಬೇಕೆಂದು ಇಷ್ಟಪಟ್ಟಿದ್ದಾರೆ. ನಿರ್ದೇಶಕ ಶಿವ ಅವರಿಗೆ ಕೋಟಿ ಕೋಟಿ ಆಫರ್ ಮಾಡಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಅಲ್ಲು ಅರವಿಂದ್ ತಮ್ಮ ಮಗನಿಗೆ ಸಿನಿಮಾ ನಿರ್ದೇಶನ ಮಾಡಲು ನಿರ್ದೇಶಕ ಕೊರಟಾಲ ಶಿವ ಅವರಿಗೆ ಬರೋಬ್ಬರಿ 13 ಕೋಟಿಗೆ ಆಫರ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಸದ್ಯಕ್ಕೆ ಶಿವ ‘ಆಚಾರ್ಯ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಮೆಗಾಸ್ಟಾರ್ ಚಿರಂಜೀವಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾ ನಡುವೆಯೂ ನಿರ್ದೇಶಕ ಕೊರಟಾಲ ಶಿವ, ಅಲ್ಲು ಅರ್ಜುನ್‍ಗೆ ಕಥೆ ರೆಡಿ ಮಾಡಿ ವಿವರಿಸಿದ್ದಾರೆ ಎನ್ನುವ ಮಾತು ಸಹ ಕೇಳಿ ಬಂದಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ.

ನಟ ಅಲ್ಲು ಅರ್ಜುನ್ ಸದ್ಯ ‘ಪುಷ್ಪಾ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಫಸ್ಟ್ ಲುಕ್ ಕೂಡ ಬಿಡುಗಡೆಯಾಗಿದೆ. ಹೀಗಾಗಿ ಇಬ್ಬರ ಸಿನಿಮಾ ಪ್ರಾಜೆಕ್ಟ್ ಗಳು ಮುಗಿದ ನಂತರ ಕೊರಟಾಲ ಶಿವು ಮತ್ತು ಅಲ್ಲು ಅರ್ಜುನ್ ಕಾಂಬಿನೇಷನ್‍ನಲ್ಲಿ ಸಿನಿಮಾ ಬರುವ ಸಾಧ್ಯತೆ ಇದೆ.

Comments

Leave a Reply

Your email address will not be published. Required fields are marked *