ಯೋಗಿ ಆದಿತ್ಯನಾಥ್ ಹಿಟ್ಲರ್ ರೀತಿ ವರ್ತಿಸುತ್ತಿದ್ದಾರೆ- ಶಿವಸೇನೆಯ ಸಾಮ್ನಾದಲ್ಲಿ ಆಕ್ರೋಶ

ಮುಂಬೈ: ಕೊರೊನಾ ವೈರಸ್ ನಡುವೆ ಯಾರೊಬ್ಬರೂ ರಾಜಕೀಯದಲ್ಲಿ ತೊಡಗಿಲ್ಲ ಎಂಬ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿಕೆ ಬೆನ್ನಲ್ಲೇ ಬಿಜೆಪಿ ವಿರುದ್ಧ ಶಿವಸೇನೆಯ ಅಸಮಾಧಾನ ಮುಂದುವರಿದಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಹಿಟ್ಲರ್ ಗೆ ಹೋಲಿಸಲಾಗಿದೆ.

ಶಿವಸೇನೆಯ ಮುಖವಾಣಿ ಸಾಮ್ನಾದ ಸಂಪಾದಕೀಯ ಪುಟದಲ್ಲಿ ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಯೋಗಿ ಆದಿತ್ಯನಾಥ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ವಲಸೆ ಕಾರ್ಮಿಕರ ವಿಚಾರದಲ್ಲಿ ಯೋಗಿ ಆದಿತ್ಯನಾಥ್ ಹಿಟ್ಲರ್‍ನಂತೆ ವರ್ತಿಸಿದ್ದಾರೆ. ಯಹೂದಿಗಳ ವಿರುದ್ಧ ನಡೆದ ದೌರ್ಜನ್ಯದ ರೀತಿಯಲ್ಲೇ ವಲಸೆ ಕಾರ್ಮಿಕರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ದೇಶದ ವಿವಿಧ ಮೂಲೆಗಳಿಂದ ತಮ್ಮೂರಿಗೆ ತೆರಳಲು ಆಗಮಿಸಿದ ಕಾರ್ಮಿಕರನ್ನು ಅವರ ಊರಿಗೆ ಹೋಗಲು ಅನುಮತಿ ನೀಡಿಲ್ಲ ಎಂದು ಸಂಜಯ್ ತಮ್ಮ ಬರಹದಲ್ಲಿ ಆರೋಪಿಸಿದ್ದಾರೆ.

ವಲಸೆ ಕಾರ್ಮಿಕರ ಕುರಿತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇತ್ತೀಚೆಗೆ ಆದೇಶ ಹೊರಡಿಸಿದ್ದು, ಕಾರ್ಮಿಕರು ಹಾಗೂ ಅವರ ಕುಟುಂಬದವರು ಕಾಲ್ನಡಿಗೆ, ಸೈಕಲ್ ಹಾಗೂ ಟ್ರಕ್‍ಗಳಲ್ಲಿ ಬರುವುದನ್ನು ಜಿಲ್ಲಾಧಿಕಾರಿಗಳು ತಡೆಯಬೇಕು. ಅಲ್ಲದೆ ಅವರಿಗೆ ಆಹಾರ, ಶೆಲ್ಟರ್ ಹಾಗೂ ಬಸ್ ವ್ಯವಸ್ಥೆ ಕಲ್ಪಿಸಬೇಕು. ನಂತರ ಊರಿಗೆ ತಲುಪಿಸಬೇಕು ಎಂದು ತಿಳಿಸಿದ್ದಾರೆ.

ಸುಮಾರು 4 ಕೋಟಿ ಜನ ವಲಸೆ ಕಾರ್ಮಿಕರು ದೇಶದ ವಿವಿಧ ಭಾಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಲಾಕ್‍ಡೌನ್ ನಂತರ ರೈಲು ಹಾಗೂ ಬಸ್‍ಗಳ ಮೂಲಕ 75 ಲಕ್ಷ ಜನ ಅವರ ಮನೆಗಳನ್ನು ತಲುಪಿದ್ದಾರೆ. ವಲಸೆ ಕಾರ್ಮಿಕರಿಗಾಗಿಯೇ ಕೇಂದ್ರ ಸರ್ಕಾರ ಮೇ 1ರಿಂದ 2,600 ಶ್ರಮಿಕ್ ವಿಶೇಷ ರೈಲುಗಳನ್ನು ಆರಂಭಿಸಲಾಗಿದೆ.

ಇತ್ತೀಚೆಗೆ ಸಾಮ್ನಾ ಪತ್ರಿಕೆಯ ಸಂಪಾದಕೀಯದಲ್ಲಿ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ವಿರುದ್ಧ ಬರೆಯಲಾಗಿತ್ತು. ಫಡ್ನವಿಸ್ ಅವರು ಆರಂಭಿಸಿದ ಮಹಾರಾಷ್ಟ್ರ ಬಚಾವೋ ಆಂದೋಲನ ಪ್ರಾರಂಭಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಲಾಗಿತ್ತು. ಅಲ್ಲದೆ ಉದ್ಧವ್ ಠಾಕ್ರೆ ಆಡಳಿತಾವಧಿಯಲ್ಲಿ ರಾಜ್ಯ ಸುರಕ್ಷಿತವಾಗಿದೆ ಎಂದು ವಾದಿಸಲಾಗಿತ್ತು.

ಇತ್ತೀಚೆಗೆ ಮಹಾರಾಷ್ಟ್ರ ಬಿಜೆಪಿ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತ್ತು. ಕೊರೊನಾ ನಿಯಂತ್ರಿಸುವಲ್ಲಿ ಉದ್ಧವ್ ಠಾಕ್ರೆ ವಿಫಲರಾಗಿದ್ದಾರೆ. ಅಧಿಕಾರಿಗಳ ಮೇಲೆ ಅವಲಂಬಿತರಾಗಿದ್ದಾರೆ ಎಂದು ಆರೋಪಿಸಿತ್ತು.

Comments

Leave a Reply

Your email address will not be published. Required fields are marked *