ಶನಿವಾರ ಸಂಜೆ 7ರಿಂದ ಸೋಮವಾರ ಬೆಳಗ್ಗೆ 7ರ ವರೆಗೆ ಕರ್ಫ್ಯೂ: ಭಾಸ್ಕರ್ ರಾವ್

ಬೆಂಗಳೂರು: ಲಾಕ್‍ಡೌನ್ 4.0 ಭಾಗವಾಗಿ ರಾಜ್ಯ ಸರ್ಕಾರ ಮಾರ್ಗಸೂಚಿ ರೂಪಿಸಿದ್ದು, ಭಾನುವಾರ ಸಂಪೂರ್ಣ ಲಾಕ್‍ಡೌನ್ ಜಾರಿಯಲ್ಲಿರುತ್ತದೆ ಎಂದು ನಿಯಮ ರೂಪಿಸಲಾಗಿತ್ತು. ಇದೀಗ ಭಾನುವಾರ ಜಾರಿಯಾಗುವ ಕರ್ಫ್ಯೂ ಕುರಿತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಾಹಿತಿ ನೀಡಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶನಿವಾರ ಸಂಜೆ 7 ರಿಂದ ಸೋಮವಾರ ಬೆಳಗ್ಗೆ 7ರ ವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ. ಅಗತ್ಯ ಸೇವೆ ನೀಡುವವರಿಗೆ ಮಾತ್ರ ವಿನಾಯ್ತಿ ಇರುತ್ತದೆ ಉಳೆದೆಲ್ಲವೂ ಬಂದ್ ಆಗಲಿದೆ. ಮಾಧ್ಯಮ, ಹಣ್ಣು, ತರಕಾರಿ, ಮಾಂಸ, ವೈದ್ಯರು, ನರ್ಸ್ ಹಾಗೂ ಅಂಬುಲೆನ್ಸ್ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಲಾಕ್‍ಡೌನ್ ಒಂದು ಮತ್ತು ಎರಡರ ಅವಧಿಯಲ್ಲಿ ಇದ್ದ ನಿಯಮಗಳೆಲ್ಲವೂ ಅನ್ವಯವಾಗುತ್ತವೆ. ಅನಗತ್ಯವಾಗಿ ಯಾರೂ ಹೊರಗೆ ಓಡಾಡಬಾರದು. ಬ್ಯಾರಿಕೇಡ್ ಹಾಕಿ ರಸ್ತೆ ಸಂಪೂರ್ಣ ಬಂದ್ ಮಾಡಲಾಗುತ್ತದೆ ಎಂದು ವಿವರಿಸಿದರು.

ಕರ್ಫ್ಯೂ ಅವಧಿಯಲ್ಲಿ ಸುಖಾ ಸುಮ್ಮನೆ ಓಡಾಡಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಿಗದಿಯಾಗಿರುವ ಮದುವೆ ಕಾರ್ಯಕ್ರಮಗಳಿಗೆ ಯಾವುದೇ ಅಡ್ಡಿಯಿಲ್ಲ. ತರಕಾರಿ, ಮೊಟ್ಟೆ, ಮಾಂಸ ಖರೀದಿಗೆ ತಮ್ಮ ವಾಹನಗಳನ್ನು ಬಳಸಬಹುದು. ಅಲ್ಲದೆ ಹೋಮ್ ಡೆಲಿವರಿಗೆ ಅವಕಾಶ ನೀಡಲಾಗಿದೆ. ಅಗತ್ಯ ಸೇವೆ ಹೊರತುಪಡಿಸಿ ಎಲ್ಲವೂ ಬಂದ್ ಆಗಲಿದೆ ಎಂದು ತಿಳಿಸಿದರು.

ಟ್ರಾಫಿಕ್ ಪೊಲೀಸ್ ಪೇದೆಗೆ ಕೊರೊನಾ ಸೋಂಕು ತಗುಲಿರುವ ಕುರಿತು ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ಮಾಹಿತಿ ನೀಡಿದ್ದು, ಪ್ರಾಥಮಿಕ ಸಂಪರ್ಕ ಹೊಂದಿದ್ದವರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ. ಅಲ್ಲದೆ ಸಂಪರ್ಕದಲ್ಲಿರುವವರ ಹುಡುಕಾಟ ಕಾರ್ಯ ನಡೆಯುತ್ತಿದೆ. ಯಾವ ಸಿಬ್ಬಂದಿ ಅವರ ಸಂಪರ್ಕಕ್ಕೆ ಬಂದಿದ್ದಾರೋ ಅವರನ್ನು ಕ್ವಾರಂಟೈನ್ ಮಾಡಲಾಗುವುದು. ಸಧ್ಯಕ್ಕೆ ಪೊಲೀಸ್ ಠಾಣೆಯನ್ನು ಸ್ಯಾನಿಟೈಸ್ ಮಾಡಲಾಗಿದೆ. ಠಾಣೆಯ ಕೆಲಸ ನಿರಂತರವಾಗಿರುತ್ತದೆ ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *