15 ತಿಂಗ್ಳ ಮಗುವನ್ನ ಮನೆಯಲ್ಲೇ ಬಿಟ್ಟು ಹೆಮ್ಮಾರಿ ವಿರುದ್ಧ ಹೋರಾಟ

– ಒಂದು ತಿಂಗಳಿಂದ ಮನೆಗೆ ಹೋಗದೇ ನರ್ಸ್ ಕೆಲಸ

ವಿಜಯಪುರ: ಮಹಾಮಾರಿ ಕೊರೊನಾ  ವೈರಸ್ ವಿರುದ್ಧ ಜೀವಗಳನ್ನು ರಕ್ಷಿಸಲು ಕೊರೊನಾ ವಾರಿಯರ್ಸ್ ತಮ್ಮ ಜೀವವನ್ನೇ ಪಣಕ್ಕಿಟ್ಟು ಕೆಲಸ ಮಾಡುತ್ತಿದ್ದಾರೆ. ಇದೀಗ ನರ್ಸ್ 15 ತಿಂಗಳ ಮಗುವನ್ನು ಮನೆಯಲ್ಲೇ ಬಿಟ್ಟು ಹೆಮ್ಮಾರಿ ವಿರುದ್ಧ ಹೋರಾಟ ಮಾಡುತ್ತಿದ್ದಾರೆ.

ವಿಜಯಪುರ ನಗರದ ಶಕ್ತಿ ನಗರ ನಿವಾಸಿ ಸವಿತಾರಾಣಿ ನಗರದ ಕೋವಿಡ್ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ಒಂದು ತಿಂಗಳಿನಿಂದ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಈವರೆಗೆ ಮನೆಗೆ ಹೋಗಿಲ್ಲ, 15 ತಿಂಗಳ ಹೆಣ್ಣು ಮಗು ಹಾಗೂ 3 ವರ್ಷದ ಗಂಡು ಮಗುವನ್ನ ಅಜ್ಜಿ ಮನೆಯಲ್ಲಿ ಬಿಟ್ಟು ಕೆಲಸ ಮಾಡುತ್ತಿದ್ದಾರೆ.

ಹೀಗಾಗಿ ಸವಿತಾರಾಣಿ ಪತಿ ಚಂದ್ರಶೇಖರ್ ಮಕ್ಕಳನ್ನು ಭೇಟಿ ಮಾಡಸಲೆಂದು ಹೆರಿಟೇಜ್ ಹೋಟೆಲ್‌ಗೆ ಬಂದಿದ್ದಾರೆ. ಆದರೆ ತಾಯಿಯನ್ನ ಕಂಡ ಮಕ್ಕಳು ಅಮ್ಮನಿಗಾಗಿ ಅಳಲಾರಂಭಿಸಿವೆ. ಇತ್ತ ಅಮ್ಮ ಸವಿತಾರಾಣಿ ಕೂಡ ಮಕ್ಕಳನ್ನು ಕಂಡು ಅಪ್ಪಿಕೊಂಡು ಮುದ್ದಾಡಲಾರದೆ ಕಣ್ಣೀರು ಹಾಕಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಅಜ್ಜಿ ಮನೆಯಲ್ಲಿರುವ ಮಗು ಅಮ್ಮನ ನೆನಪಾಗಿ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅಳುತ್ತಾಳೆ. ರಾತ್ರಿ ಎದ್ದು ಒಬ್ಬಳೆ ಮನೆ ತುಂಬಾ ಅಡ್ಡಾಡಿ ಅಮ್ಮನಿಗಾಗಿ ಹುಡುಕಾಡುತ್ತಾಳೆ. ಹೀಗಾಗಿ ಮಗುವಿನ ಆರೋಗ್ಯದಲ್ಲೂ ಏರುಪೇರಾಗುತ್ತಿದೆ ಎಂದು ತಂದೆ ಹೇಳಿದ್ದಾರೆ.

3 ವರ್ಷದ ಮಗನೂ ಕೂಡ ಅಮ್ಮನಿಗಾಗಿ ಮನೆಯಲ್ಲಿ ಗಲಾಟೆ ಮಾಡುತ್ತಿದ್ದಾನೆ. ಈ ವಿಚಾರವನ್ನು ಫೋನ್ ಮೂಲಕ ತಿಳಿದು ಇತ್ತ ತಾಯಿ ಸವಿತಾರಾಣಿಯು ಕಣ್ಣೀರು ಹಾಕುತ್ತಲೇ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಈ ವೇಳೆ ಮಾತನಾಡಿದ ನರ್ಸ್, ಇಂತಹ ಪರಿಸ್ಥಿತಿ ಯಾವ ತಾಯಿಗೂ ಬರುವುದು ಬೇಡ ಎಂದು ಭಾವುಕರಾಗಿದ್ದಾರೆ.

 

Comments

Leave a Reply

Your email address will not be published. Required fields are marked *