ಬಾಗಲಕೋಟೆಯಲ್ಲಿ ಇಂದು 15 ಮಂದಿಗೆ ಕೊರೊನಾ- ಸೋಂಕಿತರ ಸಂಖ್ಯೆ 24ಕ್ಕೆ ಏರಿಕೆ

ಬಾಗಲಕೋಟೆ: ಜಿಲ್ಲೆಯಲ್ಲಿಂದು ಕೊರೊನಾ ಬಿರುಗಾಳಿ ಬೀಸಿದೆ. ಬಾಗಲಕೋಟೆಯ ಮುಧೋಳ ತಾಲೂಕಿನಲ್ಲಿ ಕೊರೊನಾ ಪ್ರಕರಣ ಪತ್ತೆಯಾಗಿದೆ. ಮುಧೋಳ ನಗರದಲ್ಲೇ ಇಂದು ಒಂದೇ ದಿನ 15 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.

ಇದರಲ್ಲಿ 14 ಜನ ತಬ್ಲಿಘಿಗಳು ಹಾಗೂ ಇನ್ನೋರ್ವನಿಗೆ ಅನಾರೋಗ್ಯದಿಂದ ಸೋಂಕು ಕಾಣಿಸಿಕೊಂಡಿದೆ. ಮಾರ್ಚ್ 3 ರಂದು ಮುಧೋಳ ಪಟ್ಟಣದಿಂದ ಒಟ್ಟು 17 ಜನ ಗುಜರಾತ್ ರಾಜ್ಯದ ಅಹಮದಾಬಾದ್ ನಲ್ಲಿ ನಡೆದ ತಬ್ಲಿಘಿ ಜಮಾತ್‍ನಲ್ಲಿ ಭಾಗಿಯಾಗಿದ್ರು. ನಂತರ ಮೇ 8ಕ್ಕೆ ಮುಧೋಳ ನಗರಕ್ಕೆ ವಾಪಸ್ಸಾಗಿದ್ರು. ಅಲ್ಲಿಂದ ವಾಪಸ್ಸಾದ 17 ತಬ್ಲಿಘಿಗಳನ್ನು ಕ್ವಾರಂಟೈನ್ ನಲ್ಲಿ ಇರಿಸಲಾಗಿತ್ತು.

ಎರಡು ದಿನಗಳ ಹಿಂದೆ ಆ 17 ಮಂದಿಯ ಗಂಟಲು ದ್ರವ ಪರೀಕ್ಷೆಗೆ ಕಳಿಸಲಾಗಿತ್ತು. ಇಂದು 17 ತಬ್ಲಿಘಿಗಳಲ್ಲಿ 14 ಜನರ ವರದಿ ಪಾಸಿಟಿವ್ ಬಂದಿದ್ದು, ಮೂವರ ವರದಿ ನೆಗೆಟಿವ್ ಅಂತ ಬಂದಿದೆ. ಈ ಮೊದಲು ಅಹಮದಾಬಾದ್ ನಲ್ಲೇ ಇವರನ್ನು ಕ್ವಾರಂಟೈನ್ ಮಾಡಿ ಸ್ವಾಬ್ ಟೆಸ್ಟ್ ಮಾಡಲಾಗಿತ್ತು. ನಮ್ಮ ವರದಿ ಆವಾಗ ನೆಗೆಟಿವ್ ಬಂದಿತ್ತು ಎಂದು ತಬ್ಲಿಘಿಗಳು ಹೇಳಿದ್ದರು.

ಸದ್ಯ 14 ಮಂದಿಯ ಸೋಂಕು ದೃಢಪಟ್ಟಿದೆ. ರೋಗಿ ನಂ.865(55 ವರ್ಷ)ದ ವ್ಯಕ್ತಿಗೂ ಇಂದು ಸೋಂಕು ತಗುಲಿದೆ. 865 ಹೊರತುಪಡಿಸಿ ಎಲ್ಲರಿಗೂ ಅಹಮದಾಬಾದ್ ತಬ್ಲಿಘಿ ನಂಟಿನಿಂದಾಗಿ ಸೋಂಕು ತಗುಲಿದೆ. ಹೀಗಾಗಿ ಬಾಗಲಕೋಟೆ ಜಿಲ್ಲೆಯ ಜನತೆಯಲ್ಲಿ ಆತಂಕ ಹೆಚ್ಚಿಸಿದೆ.

ಡಿಸಿಎಂ ಗೋವಿಂದ ಕಾರಜೋಳ ಕ್ಷೇತ್ರದಲ್ಲೇ ಇಂದು 14 ಜನರಿಗೆ ಕೊರೊನಾ ತಗುಲಿದ್ದು, ಈವರೆಗೂ ಮುಧೋಳ ತಾಲೂಕಿನಲ್ಲಿ 34 ಜನರಿಗೆ ಸೋಂಕು ತಗುಲಿದಂತಾಗಿದೆ. ಸೋಮವಾರವೂ ಓರ್ವ ತಬ್ಲಿಘಿಗೆ ಸೋಂಕು ದೃಢಪಟ್ಟಿದ್ದು, ಬಾಗಲಕೋಟೆ ಜಿಲ್ಲೆಗೆ ತಬ್ಲಿಘಿ ಕಾಟ ಶುರುವಾಯ್ತಾ ಅನ್ನೋ ಆತಂಕ ಶುರುವಾಗಿದೆ. ಇದುವರೆಗೂ ಜಿಲ್ಲೆಯಲ್ಲಿ ಒಟ್ಟು 68 ಜನರಿಗೆ ಕೊರೊನಾ ಸೋಂಕು ಹರಡಿದ್ದು ಜಿಲ್ಲೆಯ ಜನರನ್ನು ಬೆಚ್ಚಿಬೀಳುವಂತೆ ಮಾಡಿದೆ.

Comments

Leave a Reply

Your email address will not be published. Required fields are marked *