ಮಡಿಕೇರಿ To ಉತ್ತರಪ್ರದೇಶ – ಸಾರಿಗೆ ವ್ಯವಸ್ಥೆ ಇಲ್ಲದೆ ಕಾಲ್ನಡಿಗೆಯಲ್ಲೇ ಹೊರಟ ಕಾರ್ಮಿಕರು

ಮಡಿಕೇರಿ: ಕೋವಿಡ್-19 ಪರಿಣಾಮ ದೇಶಾದ್ಯಂತ ಲಾಕ್‍ಡೌನ್ ಘೋಷಿಸಿದ್ದರಿಂದ ಕೂಲಿ ಕೆಲಸಕ್ಕೆ ಕೊಡಗಿಗೆ ಬಂದಿದ್ದ ಉತ್ತರ ಪ್ರದೇಶದ ಕಾರ್ಮಿಕರು ಹುಟ್ಟೂರಿಗೆ ವಾಪಸ್ ಹೋಗಲು ಆಗದೇ ಸಂಕಷ್ಟದಲ್ಲಿದ್ದರು. ಈಗ ಬಸ್ ವ್ಯವಸ್ಥೆ ಕೂಡ ಇಲ್ಲದ ಹಿನ್ನೆಲೆ ಕಾಲ್ನಡಿಗೆಯಲ್ಲಿಯೇ ಹುಟ್ಟೂರಿನತ್ತ ಕಾರ್ಮಿಕರು ಪ್ರಯಾಣ ಬೆಳೆಸಿದ್ದಾರೆ.

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಮಾದಾಪುರದಿಂದ ಮೂಲ ನೆಲೆಗಳಿಗೆ ಸುಮಾರು 50ಕ್ಕು ಹೆಚ್ಚು ಕೂಲಿ ಕಾರ್ಮಿಕರು ಗಂಟು, ಮೂಟೆ ಕಟ್ಟಿಕೊಂಡು ಪ್ರಯಾಣ ಬೆಳೆಸಿದ್ದಾರೆ. ಜಿಲ್ಲೆಯಿಂದ ಪಾಸ್ ಹಾಗೂ ಯಾವುದೇ ಸಾರಿಗೆ ವ್ಯವಸ್ಥೆ ಲಭ್ಯವಾಗದೇ ಇರುವುದರಿಂದ ಕೊಡಗಿನಿಂದ ಉತ್ತರಪ್ರದೇಶಕ್ಕೆ 2,800 ಕಿ.ಮೀ ನಡದೇ ಹೋಗಲು ನಿರ್ಧರಿಸಿದ್ದಾರೆ. ಇಂದು ಬೆಳಗ್ಗೆ 6 ಗಂಟೆಯಿಂದ ನಡೆಯುತ್ತಿರುವ ಕಾರ್ಮಿಕರು ಈಗಾಗಲೇ 18 ಕಿ.ಮೀ ನಡೆದಿದ್ದು, ಸುಂಟಿಕೊಪ್ಪದ 7ನೇ ಹೊಸಕೋಟೆ ತಲುಪಿದ್ದಾರೆ.

ನಾವೆಲ್ಲರೂ ಉತ್ತರ ಪ್ರದೇಶದಿಂದ ಇಲ್ಲಿಗೆ ಕೆಲಸಕ್ಕೆ ಬಂದಿದ್ದೆವು. ನಮ್ಮೂರಿಗೆ ಹೋಗಲು ನಮ್ಮ ಬಳಿ ಯಾವುದೇ ಪಾಸ್ ವ್ಯವಸ್ಥೆ ಇಲ್ಲ. ನಮ್ಮ ಕಂಪನಿ ವ್ಯವಸ್ಥಾಪಕರು ನಮ್ಮನ್ನು ನಮ್ಮೂರಿಗೆ ಹೋಗಲು ಬಿಡುತ್ತಿಲ್ಲ. ಹಲವು ದಿನಗಳಿಂದ ನಮಗೆ ಸರಿಯಾಗಿ ಊಟ, ತಿಂಡಿ ವ್ಯವಸ್ಥೆಯೂ ಇಲ್ಲದಂತೆ ಆಗಿದೆ. ಉತ್ತರ ಪ್ರದೇಶದಿಂದ ಕೊಡಗಿಗೆ ಬಂದು 5 ತಿಂಗಳು ಕಳೆದಿವೆ. ಲಾಕ್‍ಡೌನ್ ಘೊಷಿಸಿದ ಪರಿಣಾಮ ಸಾಕಷ್ಟು ಸಮಸ್ಯೆಯನ್ನು ಅನುಭವಿಸುತ್ತಿದ್ದೇವೆ. ಆದ್ದರಿಂದ ಎಲ್ಲವನ್ನು ತೆಗೆದುಕೊಂಡು ಊರಿಗೆ ಕಾಲ್ನಡಿಗೆಯಲ್ಲಿ ಹೊರಟಿದ್ದೇವೆ ಎಂದು ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *