ದಾವಣಗೆರೆಗೆ ಹೋಗಿ ಕೊರೊನಾ ಹೊತ್ತು ತಂದ ಸಂಡೂರಿನ ಮಹಿಳೆ

– ಟ್ರಾವೆಲ್ ಹಿಸ್ಟರಿಗಾಗಿ ತಲೆ ಕೆಡಿಸಿಕೊಂಡ ಆರೋಗ್ಯ ಇಲಾಖೆ

ಬಳ್ಳಾರಿ: ಜಿಲ್ಲೆಯ ನೆರೆಯ ದಾವಣಗೆರೆ ಜಿಲ್ಲೆಗೆ ಹೋಗಿ ಬಂದ ಗಣಿನಾಡು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ 37 ವರ್ಷದ ಮಹಿಳೆಯೋರ್ವಳು ಮಹಾಮಾರಿ ಕೊರೊನಾ ವೈರಸ್ ಅನ್ನು ಹೊತ್ತು ತಂದಿದ್ದಾರೆ.

ದಾವಣಗೆರೆಯಲ್ಲಿ ತಮ್ಮ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಸಂಡೂರು ತಾಲೂಕಿನ ಕೃಷ್ಣಾನಗರದ ಮಹಿಳೆಗೆ ಕೊರೊನಾ ಪಾಸಿಟಿವ್ ಬಂದಿದೆ. ಜಿಲ್ಲೆಯ ಹೊಸಪೇಟೆ, ಸಿರುಗುಪ್ಪ, ಬಳ್ಳಾರಿ ತಾಲೂಕುಗಳಿಗಷ್ಟೇ ಸೀಮಿತವಾಗಿದ್ದ ಮಹಾಮಾರಿ ಕೊರೊನಾ ಸಂಡೂರು ತಾಲೂಕಿಗೂ ಲಗ್ಗೆಯಿಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಈವರೆಗೂ 15 ಪಾಸಿಟಿವ್ ಪ್ರಕರಣಗಳು ಪತ್ತೆಯಾದಂತಾಗಿದೆ. ಇವುಗಳ ಪೈಕಿ 11 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿ ತಮ್ಮ ತಮ್ಮ ಮನೆಗಳಿಗೆ ತೆರಳಿದ್ದಾರೆ.

ಈ ಮಹಿಳೆ ಕ್ವಾರಂಟೈನ್‍ನಲ್ಲಿ ಇರಲಿಲ್ಲ. ಪಕ್ಕದ ದಾವಣಗೆರೆ ಜಿಲ್ಲೆಗೆ ತೆರಳಿದ್ದ ಈ ಮಹಿಳೆ ವಿಳಾಸ ಪಡೆದ ಜಿಲ್ಲಾಡಳಿತ, ಆ ಮಹಿಳೆಯಲ್ಲಿ ಕೆಮ್ಮು- ನೆಗಡಿ, ಜ್ವರ ಕಂಡುಬಂದ ಹಿನ್ನೆಲೆಯಲ್ಲಿ ಸಂಡೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಬಳಿಕ ಗಂಟಲು ದ್ರವವನ್ನು ಸಂಗ್ರಹಿಸಿ ಲ್ಯಾಬ್‍ಗೆ ರವಾನೆ ಮಾಡಲಾಗಿತ್ತು. ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ಲ್ಯಾಬ್ ನಲ್ಲಿ ಈ ಮಹಿಳೆಗೆ ಕೊರೊನಾ ಸೋಂಕಿರೋದು ದೃಢಪಟ್ಟಿದೆ ಎಂದು ಡಿಸಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.

ಕೊರೊನಾ ಪಾಸಿಟಿವ್ ವರದಿ ಬಂದ ತಕ್ಷಣ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಆ ಮಹಿಳೆಯನ್ನ ರವಾನೆ ಮಾಡಲಾಗಿದೆ. ಈ ಮಹಿಳೆಗೆ ಕೊರೊನಾ ಸೋಂಕು ದೃಢವಾಗಿರೋದಕ್ಕೆ ಟ್ರಾವೆಲ್ ಹಿಸ್ಟರಿ ಇಲ್ಲ. ಟ್ರಾವೆಲ್ ಹಿಸ್ಟರಿ ಇಲ್ಲದೇ ಮಹಾಮಾರಿ ಕೊರೊನಾ ಸೋಂಕು ದೃಢವಾಗಿರುವುದಕ್ಕೆ ಜಿಲ್ಲಾಡಳಿತಕ್ಕೆ ದೊಡ್ಡ ತಲೆ ನೋವಾಗಿದೆ. ಟ್ರಾವೆಲ್ ಹಿಸ್ಟರಿ ಪತ್ತೆ ಹೆಚ್ಚುತ್ತಿರುವ ಜಿಲ್ಲಾಡಳಿತ, ಮಹಿಳೆಯ ಕುಟುಂಬಸ್ಥರನ್ನ ಹಾಗೂ ಪ್ರಾಥಮಿಕ ಸಂಪರ್ಕ ಹೊಂದಿದವವರನ್ನು ಕ್ವಾರಂಟೈನ್ ಮಾಡಲು ನಿರ್ಧರಿಸಿದೆ. ಆದರೆ ಸೋಂಕಿತ ಮಹಿಳೆ ಮಾತ್ರ ಜಿಲ್ಲಾಡಳಿತಕ್ಕೆ ಸಹಕಾರ ನೀಡುತ್ತಿಲ್ಲ ಎಂಬ ಮಾಹಿತಿಯು ಮೂಲಗಳಿಂದ ಲಭ್ಯವಾಗಿದೆ.

Comments

Leave a Reply

Your email address will not be published. Required fields are marked *