ನಿಷೇಧಾಜ್ಞೆ ಉಲ್ಲಂಘನೆ- ಪ್ರಶ್ನಿಸಿದ ಮಹಿಳಾ ಪಿಎಸ್‍ಐ ಮೇಲೆ ಬಿಜೆಪಿ ಜಿಲ್ಲಾಧ್ಯಕ್ಷನ ದೌರ್ಜನ್ಯ

ಮಂಡ್ಯ: ಕೊರೊನಾ ವಾರಿಯರ್ಸ್ ಮೇಲೆ ದೌರ್ಜನ್ಯ ಮುಂದುವರಿದಿದ್ದು, ಮಂಡ್ಯದಲ್ಲಿ ರಾಜಕೀಯ ಪುಡಾರಿಗಳು ಪೊಲೀಸರ ಮೇಲೆ ದೌರ್ಜನ್ಯ ಎಸಗಿದ್ದಾರೆ.

ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯ ಮಹಿಳಾ ಪ್ರೊಬೇಷನರಿ ಪಿಎಸ್‍ಐ ನಿಖಿತಾ ಮೇಲೆ ಮಂಡ್ಯ ಬಿಜೆಪಿ ಜಿಲ್ಲಾಧ್ಯಕ್ಷ ವಿಜಯ್‍ಕುಮಾರ್ ದೌರ್ಜನ್ಯ ಎಸಗಿದ್ದಾರೆ. ವಿಜಯ್‍ಕುಮಾರ್ ಸರ್ಕಾರದ ಲಾಕ್‍ಡೌನ್ ನಿಯಮ ಉಲ್ಲಂಘಿಸಿ ಮಂಗಳವಾರ ಸಂಜೆ ಏಳು ಗಂಟೆಯ ನಂತರ ಕೆ.ಆರ್.ಪೇಟೆಯಲ್ಲಿ ಕಾರಿನಲ್ಲಿ ಸಂಚರಿಸುತ್ತಿದ್ದ. ಈ ವೇಳೆ ವಿಜಯ್‍ಕುಮಾರ್ ಕಾರು ತಡೆದ ನಿಖಿತಾ, ನಿಷೇಧಾಜ್ಞೆ ಜಾರಿಯಲ್ಲಿದೆ ಓಡಾಟ ಮಾಡಬಾರದು ಎಂದಿದ್ದಾರೆ. ಈ ವೇಳೆ ವಿಜಯ್ ಕುಮಾರ್ ಆವಾಜ್ ಹಾಕಿದ್ದಾರೆ.

ನಾನು ಬಿಜೆಪಿ ಜಿಲ್ಲಾಧ್ಯಕ್ಷ, ನನ್ನ ನೀನು ಕೇಳುವ ಹಾಗೆ ಇಲ್ಲ. ನಿನ್ನದು ಅತೀಯಾಗುತ್ತಿದೆ. ನೀನು ಪಿಎಸ್‍ಐ ಅಲ್ಲ ಇನ್ನೂ ಪ್ರೊಬೇಷನರಿ. ನಾನು ಸಿಎಂ, ಡಿಸಿಎಂ, ಡಿಸಿ, ಎಸ್‍ಪಿಗೆ ಕರೆ ಮಾಡುತ್ತೇನೆ. ನನ್ನ ಮೇಲೆ ಹಲ್ಲೆ ಮಾಡಿದ್ದೀಯಾ ಅಂತಾ ದೂರು ನೀಡುತ್ತೇನೆ. ನಿನ್ನನ್ನು ಕೆಲಸದಿಂದ ತೆಗೆಸುತ್ತೇನೆ ಎಂದು ವಿಜಯ್‍ಕುಮಾರ್ ಬೆದರಿಸಿದ್ದಾನೆ.

ಇದೀಗ ಅನಿತಾ ಅವರು ದೂರು ನೀಡಿದ್ದು, ಕೆಲಸಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ವಿಜಯ್‍ಕುಮಾರ್ ವಿರುದ್ಧ ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ ಅನ್ವಯ ವಿಜಯ್‍ಕುಮಾರ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ನಂತರ ಸ್ಟೇಷನ್ ಬೇಲ್‍ನಲ್ಲಿ ವಾಪಸ್ ಕಳುಹಿಸಿದ್ದಾರೆ. ರಾಜಕೀಯ ಪುಡಾರಿಗಳಿಗೆ ಜೈಲಿಲ್ಲ, ಸ್ಟೇಷನ್ ಬೇಲ್ ಸಿಕ್ಕಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *