ಸಿಡಿಲು ಬಡಿದು ಅಳಿಯ-ಮಾವ ಸಾವು

ಗದಗ: ಸಿಡಿಲು ಬಡಿದು ಅಳಿಯ-ಮಾವ ಸಾವನ್ನಪ್ಪಿದ ಘಟನೆ ರೋಣ ತಾಲೂಕಿನ ಅಬ್ಬಿಗೇರಿ ಬಳಿ ನಡೆದಿದೆ.

ರೋಣ ತಾಲೂಕಿನ ಕೊತಬಾಳ ನಿವಾಸಿ ಅಂಕ್ಲಪ್ಪ ಪಾಗದ್ (32) ಮೃತ ಮಾವ ಹಾಗೂ ಅಬ್ಬಿಗೇರಿಯ ಕಿರಣ್ (12) ಮೃತ ದುರ್ದೈವಿಗಳು. ಲಾಕ್‍ಡೌನ್‍ನಿಂದಾಗಿ ಕಿರಣ್ ಕೊತಬಾಳದ ಮಾವನ ಮನೆಯಲ್ಲಿ ಉಳಿದುಕೊಂಡಿದ್ದ. ಇಂದು ಮಾವ ಅಂಕ್ಲಪ್ಪ ಅವರ ಜೊತೆಗೆ ತಮ್ಮ ಗ್ರಾಮಕ್ಕೆ ಬೈಕ್‍ನಲ್ಲಿ ಹೋಗುತ್ತಿದ್ದ. ಅಬ್ಬಿಗೇರಿಗೆ ಸ್ವಲ್ಪ ದೂರದಲ್ಲಿದ್ದಾಗಲೇ ಸಿಡಿಲು ಬಡಿದು ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ರೋಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತ ದೇಹಗಳನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿದೆ. ಗದಗ ನಗರ, ರೋಣ, ಗಜೇಂದ್ರಗಡ ಸೇರಿದಂತೆ ಜಿಲ್ಲೆ ಕೆಲವು ಭಾಗದಲ್ಲಿ ಗುಡುಗು ಸಿಡಿಲು ಸಹಿತ ಭಾರೀ ಮಳೆಯಾಗಿದೆ.

ಕೋಟೆನಾಡು ಚಿತ್ರದುರ್ಗ ತಾಲೂಕಿನ ವಿವಿಧೆಡೆ ಉತ್ತಮ ಮಳೆಯಾಗಿದೆ. ವರುಣನ ಅಬ್ಬರದಿಂದಾಗಿ ತಗ್ಗು ಪ್ರದೇಶಗಳ ಮನೆಗಳಿಗೆ ನುಗ್ಗಿ ಹಲವೆಡೆ ಅವಾಂತರ ಸೃಷ್ಟಿಯಾಗಿದೆ. ಅಷ್ಟೇ ಅಲ್ಲದೆ ಗಾಳಿ, ಮಳೆಗೆ ಹಲವು ಮನೆ ಗೋಡೆ, ಮೇಲ್ಛಾವಣಿ ಕುಸಿದು ಬಿದ್ದಿವೆ.

ಬೆಂಗಳೂರಿನ ಹಲವೆಡೆ ಇಂದು ಧಾರಾಕಾರ ಮಳೆಯಾಗಿದೆ. ಮಲ್ಲೇಶ್ವರಂ, ಯಶವಂತಪುರ, ಪೀಣ್ಯ ದಾಸರಹಳ್ಳಿಯ, ನವರಂಗ, ಹೆಗ್ಗನಹಳ್ಳಿ, ರಾಜಗೋಪಾಲನಗರಬಾರಿ ಸೇರಿ ಹಲವೆಡೆ ಗುಡುಗು ಸಿಡಿಲು ಸಹಿತ ವರುಣ ಅಬ್ಬರಿಸಿದ್ದಾನೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

Comments

Leave a Reply

Your email address will not be published. Required fields are marked *