ಕೊಡಗಿನಲ್ಲಿ ಸಂಚಾರಕ್ಕೆ ಅವಕಾಶ ನೀಡಿದರೂ ರಸ್ತೆಗಿಳಿಯದ ಖಾಸಗಿ ಬಸ್‍ಗಳು

ಮಡಿಕೇರಿ: ಲಾಕ್‍ಡೌನ್ ಕಟ್ಟುನಿಟ್ಟಾಗಿ ಪಾಲಿಸಲು ಸಾರಿಗೆ ಸಂಚಾರವನ್ನೂ ಬಂದ್ ಮಾಡಲಾಗಿತ್ತು. ಆದರೆ ಕೊಡಗು ಜಿಲ್ಲೆ ಗ್ರೀನ್ ಝೋನ್ ಆಗಿರುವುದರಿಂದ ಸರ್ಕಾರದ ನಿರ್ದೇಶನದಂತೆ 43 ದಿನಗಳ ಬಳಿಕ ಜಿಲ್ಲೆಯಲ್ಲಿ ಸಾರ್ವಜನಿಕ ಸಾರಿಗೆಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ಆದರೆ ಬೆರಳೆಣಿಕೆಯಷ್ಟು ಕೆಎಸ್‍ಆರ್ ಟಿಸಿ ಬಸ್ ಗಳು ಮಾತ್ರ ರಸ್ತೆಗಿಳಿದಿದ್ದು, ಖಾಸಗಿ ಬಸ್ ಸಂಚಾರ ಇರಲಿಲ್ಲ.

ಸಾರ್ವಜನಿಕರ ಸಾರಿಗೆ ಸಂಚಾರಕ್ಕೆ ಕೊಡಗು ಜಿಲ್ಲಾಡಳಿತ ಅವಕಾಶ ನೀಡಿದ್ದರೂ, ಕೊಡಗಿನ ಪ್ರತಿ ಹಳ್ಳಿಗೆ ಸಂಪರ್ಕ ಸೇತುವೆಯಾಗಿರುವ ಖಾಸಗಿ ಬಸ್‍ಗಳು ರಸ್ತೆಗೆ ಇಳಿದಿಲ್ಲ. ಕೊರೊನಾ ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಬಸ್‍ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಖ್ಯವಾಗಿದೆ. ಇದಕ್ಕಾಗಿ ನಿಯಮ ರೂಪಿಸಿರುವ ಜಿಲ್ಲಾಡಳಿತ ಬಸ್‍ಗಳ ಒಟ್ಟು ಸೀಟುಗಳ ಪೈಕಿ ಶೇ.50 ರಷ್ಟರಲ್ಲಿ ಮಾತ್ರ ಪ್ರಯಾಣಿಕರನ್ನು ಸಾಗಿಸುವಂತೆ ಸೂಚಿಸಿದೆ.

ಈ ನಿಯಮ ಪಾಲನೆ ಮಾಡಲು ಶೇ.50ರಷ್ಟು ಪ್ರಯಾಣಿಕರಿಗಾಗಿ ಬಸ್‍ಗಳನ್ನು ಓಡಿಸಿದರೆ ನಷ್ಟ ಉಂಟಾಗಲಿದೆ. ಅಲ್ಲದೆ ಸೋಂಕಿನ ಭೀತಿಯೂ ಕಾಡುತ್ತಿರುತ್ತದೆ. ಕೊಡಗಿನಲ್ಲಿ ಡೈರೆಕ್ಟ್ ಸೀಟುಗಳು ಸಿಗುವುದು ಕಷ್ಟ, ಕೇವಲ ಕಟ್ ಸೀಟುಗಳು ಮಾತ್ರವೇ ದೊರೆಯುವುದು. ಹೀಗಾಗಿ ನಷ್ಟ ಉಂಟಾಗುವುದರಿಂದ ಮೇ 18 ವರೆಗೂ ಖಾಸಗೀ ಬಸ್‍ಗಳನ್ನು ಓಡಿಸುವುದಿಲ್ಲ ಎಂದು ಖಾಸಗೀ ಬಸ್ ಮಾಲೀಕರ ಸಂಘ ನಿರ್ಧರಿಸಿದೆ. ಅಲ್ಲದೆ ಖಾಸಗಿ ಬಸ್ ಮಾಲೀಕರಿಗೆ ಸರ್ಕಾರ ಸಹಾಯ ಘೋಷಣೆ ಮಾಡಬೇಕು. ಮೀನುಗಾರರ ಸಂಘ, ಹೂವು ಬೆಳೆಗಾರರಿಗೆ ಸಹಾಯ ಘೋಷಿಸಿರುವಂತೆ ಖಾಸಗಿ ಬಸ್ ಮಾಲೀಕರಿಗೂ ಘೋಷಿಸುವಂತೆ ಒತ್ತಾಯಿಸಿದ್ದಾರೆ.

Comments

Leave a Reply

Your email address will not be published. Required fields are marked *