ಮೊನ್ನೆಯಷ್ಟೇ ಬರ್ತ್‍ಡೇ ಆಚರಿಸಿಕೊಂಡಿದ್ದ ಯುವಕ ಈಜಲು ಹೋಗಿ ಸಾವು

ಚಿಕ್ಕಮಗಳೂರು: ಹೇಮಾವತಿ ನದಿಯಲ್ಲಿ ಈಜಲು ಹೋಗಿ 27 ವರ್ಷದ ಯುವಕ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ಬಳಿಯ ಹಾಲೂಕು ಕೂಡಿಗೆ ಬಳಿ ನಡೆದಿದೆ.

ಮೃತ ಯುವಕ 27 ವರ್ಷದ ಗವಿರಾಜ್, ಅಂಡುಗುಳಿ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ. ಇಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ನಾಲ್ವರು ಸ್ನೇಹಿತರು ಗ್ರಾಮದ ಬಳಿ ಹಾದು ಹೋಗಿರೋ ಹೇಮಾವತಿ ನದಿಯಲ್ಲಿ ಈಜಲು ಹೋಗಿದ್ದರು. ಆದರೆ ಯಾರಿಗೂ ಈಜು ಬರುತ್ತಿರಲಿಲ್ಲ. ಈ ವೇಳೆ ಗವಿರಾಜ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಜೊತೆಗಿದ್ದ ಸ್ನೇಹಿತರು ಆತನನ್ನು ನೀರಿನಿಂದ ಎಳೆದುಕೊಳ್ಳಲು ಪ್ರಯತ್ನಿಸಿದರು ಅದು ಸಾಧ್ಯವಾಗಿಲ್ಲ ಎಂಬ ಮಾಹಿತಿ ಲಭಿಸಿದೆ.

ಮೃತ ಗವಿರಾಜ್ ಮೊನ್ನೆಯಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದ. ಮೃತನ ಮೃತದೇಹಕ್ಕಾಗಿ ಮಧ್ಯಾಹ್ನ ಮೂರು ಗಂಟೆಯಿಂದ ಸಂಜೆವರೆಗೂ ಶೋಧ ಕಾರ್ಯ ನಡೆಸಿದ್ದು, ಐದು ಗಂಟೆ ವೇಳೆಗೆ ಮೃತದೇಹ ಪತ್ತೆಯಾಗಿದೆ. ಮೃತ ಗವಿರಾಜ್ ಮಧ್ಯಾಹ್ನ ಮನೆಗೆ ಮಟನ್ ತೆಗೆದುಕೊಂಡು ಹೋಗಿ ಕೊಟ್ಟಿದ್ದ. ಅಲ್ಲದೇ ಸ್ನೇಹಿತರ ಜೊತೆ ಈಜಲು ಹೋಗುವ ಮುನ್ನ ಮದ್ಯ ಸೇವಿಸಿದ್ದ ಎನ್ನಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ್ದ ಗೋಣಿಬೀಡು ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇನ್ನು ತಾಲೂಕಿನ ಬಾಳೂರು ಬಳಿ ಟ್ರ್ಯಾಕ್ಟರ್ ಪಲ್ಪಿಯಾಗಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ವಾಟರ್ ಸಪ್ಲೈ ಟ್ಯಾಂಕರ್ ಬಾಳೂರಿನಿಂದ ಕೊಟ್ಟಿಗೆಹಾರದ ಕಡೆ ಬರುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಮಳೆ ಇದ್ದ ಕಾರಣ ಟ್ರ್ಯಾಕ್ಟರ್ ಬ್ರೇಕ್ ಹಿಡಿದಿಲ್ಲ. ಹೀಗಾಗಿ ಟ್ರ್ಯಾಕ್ಟರ್ ಪಲ್ಟಿಯಾಗಿದೆ. ಆದರೆ, ಅದೃಷ್ಟವಶಾತ್ ಟ್ರ್ಯಾಕ್ಟರ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

Comments

Leave a Reply

Your email address will not be published. Required fields are marked *